Monday 7 October 2019

ಈ ಭ್ರಮೆ‌ ಮತ್ತೆ ನೆನಪಾಗಿ ಕಾಡುತ್ತಿದೆ......🤔🤔
***************************************
ಮೀನಿನಂಥ ಕಣ್ಣುಗಳು,
ಬಿಲ್ಲಿನಂತಹ ಹುಬ್ಬುಗಳು,
ಸಂಪಿಗೆಯಂಥ ನಾಸಿಕ.
ಹರವಾದ ಹಣೆ,
ದುಂಬಿಗಳ ಹಿಂಡಿನಂಥ
ಹಾರುವ ಮುಂಗುರುಳು,
ತುಂಬು ನುಣುಪು ಕೆನ್ನೆಗಳು,
ಕೆನೆ ಹಾಲಿನಂಥ ಮೈಬಣ್ಣ.
ಇವೆಲ್ಲ ಇದ್ದ ದಂತದ
ಬೊಂಬೆಯನ್ನು ಮಾಡಿಕೊಂಡ
ಗುಂಡ ಬಾಳ ಸಂಗಾತಿಯೆಂದು,,
ನಂತರ ನೆನಪಾಯಿತು,
ಬಾದಾಮಿ ಆಕಾರದ ಕೆಂಪು
ಹೃದಯ ಎಲ್ಲಿ ಎಂದು,
ಹುಡುಕಿಯೇ ಹುಡುಕಿದ,
ಹುಡುಕಿಯೇ ಹುಡುಕಿದ,
ಇದ್ದರಲ್ಲವೇ ಸಿಗುವುದು,
ಸಿಗಲೇ ಇಲ್ಲ........ 😪😪
**********

Sunday 6 October 2019

ಹೊಸ ಮಳೆ.
========

ಹೊಸ ಮಳೆ ತುಂತುರು ಹನಿ
ಬಿದ್ದಾಗ ಜುಮ್ಮೆಂದಿತು ಮೈ,
ಪುಳಕಿತಗೊಂಡಿತು ಮನ,
ತಂಗಾಳಿಯ ಓಲೈಕೆಗೆ

ದಣಿವಾರಿಸಿಕೊಂಡಿತು ತನು,
ಹಸಿಯಾದ ಒಣ ಮಣ್ಣಿನ
ವಾಸನೆಯ ಸವಿಯಿತು ನಾಸಿಕ,

ಮುಂಬರುವ ಹಸಿರು ಹಾಸಿಗೆ
ಕಾದು ಕುಳಿತವು ಕಣ್ಣುಗಳು,
ಮನ ತಣಿಯಿತು
ಪ್ರಕೃತಿ ನಲಿಯಿತು,

ಜೀವ ತುಂಬಿದ ಜಗವೆಲ್ಲ
ದೇವ ದೇವ ಎಂದು ನಮಿಸಿತು.
ದೇವ ದೇವ ಎಂದು ನಮಿಸಿತು.

==================

(Repeat)
ಮಳೆ.

ಬಾರದ ಮಳೆಯೇ
ಜೋರಾಗಿ ಬಾ....
ಭೂಮಿ ತಾಯಿಗೆ
ಹಸಿರು ಉಡಿಸಿ
ತಂಪು ಗೈಯಲು ಬಾ..
ರೈತನೆದೆಗೆ ಬಲವ
ತುಂಬಲು ಬಾ....
ಜಲಾಶಯಗಳು ತುಂಬಿ
ಬೆಳಕ ಹರಿಸಲು ಬಾ...
ನಮ್ಮ ಜೋಡಿಯನು
ಛತ್ರಿ ಅಡಿಯಲಿ
ಸನಿಹ ಸನಿಹಕೆ
ಬೆಚ್ಚಗೆ ನಡೆಸಲು ಬಾ......

14.07.2014
ಕೆಲವೊಮ್ಮೆ ಅರೆಜ್ಞಾನಿಗಳು ಅಜ್ಞಾನಿಗಳಿಗಿಂತ ಇತರರಿಗೆ ಹೆಚ್ಚು ತೊಂದರೆ ಕೊಡುತ್ತಾರೆ, ಅಲ್ಲದೆ ತಾವೂ ಸ್ವತಃ ತೊಂದರೆಗೆ ಸಿಲುಕುತ್ತಾರೆ.

****ದಾರ್ಶನಿಕ.
ಮನುಷ್ಯ ಸಮಾಜ ಮುಖಿಯಾಗಿ, ಸಂಘ ಜೀವಿಯಾಗಿದ್ದರೆ, ಎಂಥ ಪರಿಸ್ಥಿತಿಯಲ್ಲೂ ಖಿನ್ನತೆಯಿಂದ ದೂರವಿರ ಬಹುದು.
ಒಂದು ನೀತಿ ಕತೆ. ತಾಳ್ಮೆ ಇದ್ದರೆ ಓದಿ.....🙏🙏
============================
💥💥💥💥💥💥💥*ಕೆಂಡದಂತಿರುತ್ತೇನೆ...... ಇದ್ದಲಾಗಲ್ಲ!* 🌑 🌑🌑🌑🌑🌑 🙏🏼============🙏🏼
ಒಂದು ಊರಿನಲ್ಲಿ *ನಿವೃತ್ತಿ* ಹೊಂದಿದ ಹಿರಿಯರೆಲ್ಲಾ ಸೇರಿ ಒಂದು *ಸಂಘವನ್ನು* ಸ್ಥಾಪಿಸಿಕೊಂಡರು. ಆ ಸಂಘದ ಉದ್ದೇಶವೇನೆಂದರೆ ಸಂಘದ ಸದಸ್ಯರೆಲ್ಲರೂ ಪರಸ್ಪರರ ಕಷ್ಟಸುಖಗಳಲ್ಲಿ ಭಾಗಿಯಾಗಿ ಅವರ ಒಳಿತು ಕೆಡಕುಗಳಿಗೆ ಸ್ಪಂದಿಸುವುದಾಗಿತ್ತು. ಇದರಿಂದಾಗಿ ಬಹಳಷ್ಟು ಮಂದಿಗೆ ಉಪಯೋಗವಾಗಿದ್ದಲ್ಲದೆ, ತಮ್ಮ ಜೀವನದ ಸಂಧ್ಯಾ ಕಾಲವು ಸಾರ್ಥಕವಾಗಿ ನಡೆಯುತ್ತಿದೆ ಎನ್ನುವ ಸಂತೃಪ್ತಿಯೂ ಅವರಲ್ಲಿ ಉಂಟಾಗಿತ್ತು.
ಸಂಘದ ಸದಸ್ಯರು ಪ್ರತಿದಿನ ಸಾಯಂಕಾಲ ಒಂದೆಡೆ ನಿಯಮಿತವಾಗಿ ಸೇರಿ ತಮ್ಮ ಕಷ್ಟಸುಖಗಳನ್ನು ಹಂಚಿಕೊಳ್ಳುತ್ತಿದ್ದರು. ಹೀಗಿರಲಾಗಿ ಒಂದು ದಿನವೂ ತಪ್ಪದೇ ಸಂಜೆಯ ಕಾರ್ಯಕಲಾಪಗಳಲ್ಲಿ ಭಾಗಿಯಾಗುತ್ತಿದ್ದ ಆ ಸಂಘದ ಕಾರ್ಯದರ್ಶಿ ಸಾಲಾಗಿ ಮೂರು ದಿನಗಳ ಕಾಲ ಬರಲಿಲ್ಲ.
ಇದರಿಂದ ಆತಂಕಗೊಂಡ ಆ ಸಂಘದ ಅಧ್ಯಕ್ಷರು ಕಾರ್ಯದರ್ಶಿಗಳ ಯೋಗಕ್ಷೇಮದ ಕುರಿತು ತಿಳಿದುಕೊಂಡು ಬರಲು ಒಬ್ಬ ಸದಸ್ಯನನ್ನು ಅವರ ಮನೆಗೆ ಕಳುಹಿಸಿದರು. ಅವನಿಂದ ತಿಳಿದು ಬಂದ ವಿಷಯವೇನೆಂದರೆ, ಕಾರ್ಯದರ್ಶಿಗಳ ಮಗನಿಗೆ ಬೇರೊಂದು ಊರಿಗೆ ವರ್ಗವಾಗಿತ್ತು. ಅವರ ಪತ್ನಿಯೂ ಸಹ ಕೆಲವು ವರ್ಷಗಳ ಹಿಂದೆ ಕಾಲವಾಗಿದ್ದರಿಂದ ದಿಕ್ಕು ತೋಚದಂತಾಗಿ ಒಂಟಿತನದಿಂದ ಅವರು ಖಿನ್ನರಾಗಿದ್ದರು.
ಇದನ್ನು ತಿಳಿದುಕೊಂಡ ಅಧ್ಯಕ್ಷರು ನೇರವಾಗಿ ಕಾರ್ಯದರ್ಶಿಗಳ ಮನೆಗೆ ಹೋದರು. ಹೊರಗಡೆ ಬಹಳ ಚಳಿ ಇದ್ದದ್ದರಿಂದ ಇಬ್ಬರೂ ಅಡಿಗೆ ಮನೆಯಲ್ಲಿದ್ದ ಒಲೆಯ ಬಳಿ ಹೋದರು. ಒಲೆಯಲ್ಲಿದ್ದ ಕಟ್ಟಿಗೆಗಳು ನಿಗಿ ನಿಗಿ *ಕೆಂಡವಾಗಿ ಚೆನ್ನಾಗಿ ಉರಿಯುತ್ತಿದ್ದವು.* ಅಧ್ಯಕ್ಷರು ಒಂದು ಮಾತನ್ನೂ ಆಡದೆ ಒಲೆಯಲ್ಲಿದ್ದ ಉರಿಯುತ್ತಿದ್ದ ಒಂದು *ಕೆಂಡವನ್ನು* ತೆಗೆದು ದೂರದಲ್ಲಿರಿಸಿದರು. ಒಂದೆರಡು ಕ್ಷಣಗಳಲ್ಲಿ ಅದು ಆರಿ *ಇದ್ದಿಲಾಯಿತು* .
ಅಧ್ಯಕ್ಷರು ತಕ್ಷಣವೇ ಎದ್ದು ಹೋಗಿ ಬರುತ್ತೇನೆ ಎಂದು ಹೇಳಿದರು. ಮನೆಯ ಅಂಗಳದವರೆಗೆ ಅವರೊಂದಿಗೆ ಬಂದ ಕಾರ್ಯದರ್ಶಿಗಳು, "ನನಗೆ ಒಳ್ಳೆಯ ಗುಣಪಾಠವನ್ನು ಹೇಳಿದಿರಿ. ನಾಳೆಯಿಂದ ನಾನು ಪ್ರತಿದಿನ ಸಂಜೆ ನಡೆಯುವ ಸಂಸ್ಥೆಯ ಕಾರ್ಯಕಲಾಪಗಳಲ್ಲಿ ತಪ್ಪದೇ ಪಾಲ್ಗೊಳ್ಳುತ್ತೇನೆ" ಎಂದರು.
"ಹೌದಾ!" ಎಂದ ಅಧ್ಯಕ್ಷರಿಗೆ ಮಾತಿಗೆ ಪ್ರತಿಯಾಗಿ ಕಾರ್ಯದರ್ಶಿಗಳು, "ಒಲೆಯಲ್ಲಿನ ಇತರೆ *ಕೆಂಡಗಳ* ಜೊತೆಯಲ್ಲಿ ಇದ್ದಾಗ ಒಂದು ಕೆಂಡವು ನಿಗಿ ನಿಗಿಯಾಗಿ ಉರಿದು ಶಾಖ ಮತ್ತು ಬೆಳಕನ್ನು ಕೊಡುತ್ತಿತ್ತು. ಅದನ್ನು *ಪ್ರತ್ಯೇಕಿಸಿ* ಬೇರೆ ಮಾಡಿದಾಗ ಅದು ತನ್ನ ಸ್ವಭಾವವನ್ನು ಕಳೆದುಕೊಂಡು *ಇದ್ದಿಲಾಗಿ* ಮಾರ್ಪಟ್ಟಿತು. ಇದನ್ನು ಕಂಡ ಸಂಘದ ಕಾರ್ಯದರ್ಶಿ, ನಾನು *ಕೆಂಡದಂತಿರುತ್ತೇನೆ* .... *ಇದ್ದಲಾಗಿ* ಮಾರ್ಪಡುವುದಿಲ್ಲ" ಎಂದು ಪಶ್ಚಾತ್ತಾಪ ಪಡುತ್ತಾ ಹೇಳಿದರು.
ವ್ಯಕ್ತಿಯೊಬ್ಬ ಸಮಾಜಮುಖಿಯಾಗಿದ್ದರೆ ಅವನಲ್ಲಿನ *ಶಕ್ತಿ ಪ್ರಜ್ವಲಿಸಿ* ಪ್ರವರ್ಧಮಾನಕ್ಕೆ ಬರುತ್ತದೆ. ಅದೇ ಒಂಟಿಯಾಗಿದ್ದರೆ ಅವನಲ್ಲಿನ *ಕರ್ತೃತ್ವ* ಶಕ್ತಿ ಕ್ಷೀಣಿಸಿ ಅವನು ಕಳಾಹೀನನಾಗುತ್ತಾನೆ.
===============================
(ಆಧಾರ: ಹೈಂದವಿ ಎನ್ನುವವರು ಬರೆದ ಆಕಾಶ ದೀಪಾಲು - ಆಕಾಶ ದೀಪಗಳು ಎನ್ನುವ ( *ತೆಲುಗಿನ ನೀತಿ ಕಥೆಗಳ ಸಂಗ್ರಹದಿಂದ ಆಯ್ದ ಕಥೆ* )
ಇಲ್ಲೇ FB ಯಲ್ಲಿಯೇ ಯಾರೋ ಪೋಷ್ಟ್ ಮಾಡಿದ ಒಂದು ನೀಳವಾದ ಜೋಕ್...  ತಾಳ್ಮೆಯಿಂದ ಪೂರ್ಣ ಓದಿ.....  ನಗುವುಕ್ಕಿ ಹರಿಯದಿರಲು ಸಾಧ್ಯವೇ ಇಲ್ಲ.... 
+++++
ತಲೆ ತಿನ್ನೋದಾದರೆ ಹೀಗೆ ತಿನ್ನ ಬೇಕು...  (Repeat..ಆದರೆ, ಇನ್ನೊಮ್ಮೆ ನಕ್ಕು ಬಿಡಿ ಅಂತ ಪುನರಾವರ್ತನೆ)
***************
ತಾತನ ತಾಪತ್ರಯ
============
‘ತುಂಬಾ ಹೊಟ್ಟೆ ಉರೀತಿದೆ ಡಾಕ್ಟ್ರೆ.’
‘ಡೋಂಟ್ ವರಿ, ಮಾತ್ರೆ ಕೊಡ್ತೀನಿ.’
‘ಬೇಡ. ಉಸಿರಾಡಕ್ಕಾಗಲ್ಲ.’
‘ಯಾಕೆ?’
‘ಕೈ ನಡುಗತ್ತೆ. ಮಾತ್ರೆ ಬಾಯಿಗೆ ಹಾಕ್ಕೊಳಕ್ಕೆ ಹೋಗಿ ಎಷ್ಟೋ ಸಾರಿ ಮೂಗಿಗೆ ಒಳ್ಳೆ ವೆಡ್ಜ್ ಆದ ಹಾಗೆ ಕೂತ್ಬಿಡತ್ತೆ.’
ಔಷಧಿ ಕೊಡ್ತೀನಿ.
‘ಬೇಡ. ಹೆಂಡ್ತಿ ಬೈತಾಳೆ.’
‘ಯಾಕೆ ಬೈತಾರೆ?’
‘ಬ್ರಾಂದೀನ ಎಷ್ಟೋ ವರ್ಷ ಕೊಟ್ಟ ಔಷಧಿಂತ ಅವಳಿಗೆ ಸುಳ್ಳು ಹೇಳಿ ಕುಡೀತಿದ್ದೆ. ಗೊತ್ತಾದಾಗ್ಲಿಂದ ಯಾವ ಡಾಕ್ಟ್ರು ಯಾವ ಬಾಟಲ್ ಕೊಟ್ರೂ ಬ್ರಾಂದೀಂತ ಅವಳ ಭ್ರಾಂತಿ!’
‘ಇಂಜೆಕ್ಷನ್ನು?’
‘ನೋವಾಗತ್ತೆ. ಒಂದ್ಸರ‍್ತಿ ಇಂಜೆಕ್ಷನ್ ತೊಗೊಂಡಿದ್ದೆ, ತಕ್ಷಣ ಟೈರ್ ಅಂಗಡಿಗೆ ಹೋದೆ.’
‘ಯಾಕೆ?’
‘ಆ ನರ್ಸ್ ಮಾಡಿದ ತೂತಿಗೆ ಪಂಕ್ಷರ್ ಹಾಕಿಸ್ಕೊಳಕ್ಕೆ.’
‘ಸರೀ, ಹೊಟ್ಟೆ ಉರಿ ಶುರು ಆಗಿದ್ದು ಯಾವಾಗ?’
‘ಪಕ್ಕದ ಮನೆಯವನು ಹೊಸ ಕಾರ್ ತೊಗೊಂಡಾಗ್ಲಿಂದ!’
‘ನೀವು ಈ ವಯಸ್ಸಲ್ಲಿ ಈ ತರಹ ಹೊಟ್ಟೆ ಉರ‍್ಕೋಬಾರ‍್ದು.’
‘ಹಾಗಾದ್ರೆ ಹೊಟ್ಟೆ ಉರ‍್ಕೊಳಕ್ಕೆ ಸರಿಯಾದ ವಯಸ್ಸು ಯಾವುದು ಡಾಕ್ಟ್ರೆ?’
‘ತಾತಾ... ನನ್ನ ಕ್ಲಿನಿಕ್ ಟೈಂ ವೇಸ್ಟ್ ಮಾಡ್ಬೇಡಿ. ನಿಮಗೆ ನಿಜವಾಗಲೂ ಏನಾಗ್ತಿದೆ ಹೇಳಿ.’
‘ನನ್ನ ಎಡಗಡೆ ಕಾಲು ಬಹಳ ನೋಯುತ್ತೆ.’
‘ಅದು ವಯಸ್ಸಾಗಿರೋದ್ರಿಂದ ಹಾಗೆ.’
‘ಸುಮ್ಮನೆ ಏನೋ ಹೇಳ್ಬೇಡಿ ಡಾಕ್ಟ್ರೆ. ನನ್ನ ಬಲಗಾಲಿಗೂ ಅಷ್ಟೇ ವಯಸ್ಸಾಗಿದೆ, ಅದ್ಯಾಕೆ ನೋಯ್ತಿಲ್ಲ?’
‘ಅದು ಹಾಗಲ್ಲ; ನಾವು ಯಾವುದರ ಮೇಲೆ ಭಾರ ಬಿಡ್ತೀವೋ ಅದು ನೋವು ಬರತ್ತೆ.’
‘ಆದರೆ ನಾನು ಭಾರ ಬಿಡೋದು ವಾಕಿಂಗ್ ಸ್ಟಿಕ್ ಮೇಲೆ. ಅದಕ್ಕೇ ಅಯೋಡೆಕ್ಸ್ ಹಚ್ಚಿಬಿಡ್ಲೇನು?’
‘ತಾತಾ...’
‘ಪೇಷೆಂಟ್ ಬರ‍್ತಾ ಇದ್ದಹಾಗೇ
ತಾ ತಾ ಅಂತ ಬರೀ ಕೈಯೊಡ್ಡೋದೇ ಆಗ್ಹೋಯ್ತು.’
‘ಪ್ಲೀಸ್ ಅಜ್ಜ, ನನ್ನ ತಲೆ ತಿನ್ಬೇಡಿ. ನಿಮ್ಮ ಕಂಪ್ಲೇಂಟ್ ಏನೂಂತ ಹೇಳಿ.’
‘ಬೆಳಗ್ಗೆ ಪಾರ್ಕಲ್ಲಿ ಜೋರಾಗಿ ಓಡಿದಾಗ ಎದೆ ಬಹಳ ಜೋರಾಗಿ ಹೊಡ್ಕೊಳತ್ತೆ.’
‘ಈ ವಯಸ್ಸಲ್ಲಿ ನೀವು ಜೋರಾಗಿ ಓಡ್ತೀರಾ?’
‘ನಾನಲ್ಲ.’
‘ಮತ್ತೆ?’
‘ಸೂಪರ್ ಆಗಿರೋ ಹುಡುಗಿಯರು ಓಡ್ತಾರೆ, ನನ್ನೆದೆ ಹೊಡ್ಕೊಳತ್ತೆ.’
‘ಅಜ್ಜ... ಪ್ಲೀಸ್ ಬಿ ಸೀರಿಯಸ್.’
‘ಯಾಕೆ ಡಾಕ್ಟ್ರೆ, ಸೀರಿಯಸ್ ಆದ್ರೆ ಒಳ್ಳೆ ದುಡ್ ಎಳ್ಕೋಬಹುದು ಅಂತಾನಾ?’
‘ಥೂ, ಆ ತರಹ ಸೀರಿಯಸ್ಸಲ್ಲ ಅಜ್ಜ ನಾ ಹೇಳಿದ್ದು. ಸರಿ, ಈಗ ಇಲ್ಲಿಗೆ ಬಂದಿದ್ದಾದ್ರೂ ಯಾಕೆ ಹೇಳಿ.’
‘ಹೇಳಿದ್ನಲ್ಲ ಡಾಕ್ಟ್ರೇ, ಕಾಲು ಬಹಳ ನೋಯತ್ತೆ ಅಂತ.’
‘ಸರಿ. ಒಬ್ಬ ಸರ್ಜನ್‌ಗೆ ರೆಫರ್ ಮಾಡ್ತೀನಿ, ಅಲ್ಲಿ ತೋರಿಸಿ.’
‘ಸರ್ಜನ್ನಾ? ಬೇಡ.’
‘ಯಾಕೆ?’
‘ಗಾದೆ ಕೇಳಿಲ್ಲವೇನು? ಸಜ್ಜನರ ಸಹವಾಸ ಹೆಜ್ಜೇನು ಸವಿದಂತೆ, ಸರ್ಜನರ ಸಹವಾಸ ಹೆಜ್ಜೇನು ಕಡಿದಂತೆ.
ನನ್ನ - ಫ್ರೆಂಡ್‌ಗೆ ಆಗಿದ್ದನ್ನ ಕೇಳಿ ಏನೇ ಆದರೂ ಸರ್ಜನ್ ಹತ್ರ ಹೋಗಬಾರದೂಂತ ಡಿಸೈಡ್ ಮಾಡಿದ್ದೀನಿ.’
‘ಏನಾಯ್ತು?’
‘ಹೊಟ್ಟೆ ಆಪರೇಷನ್ ಮೊದಲು ಮಾಡಿದರು. ಇವನಿಗೆ ಬಹಳ ಬಾಯಾರಿಕೆ ಶುರುವಾಯ್ತು.’
‘ಏಕೆ?’
‘ಒಳಗೆ ಸ್ಪಂಜ್ ಬಿಟ್ಬಿಟ್ಟಿದ್ರು. ಮತ್ತೆ ಕೊಯ್ದ್ರು ’
‘ಸರಿಹೋಯ್ತಾ?’
‘ಇಲ್ಲ. ಇದ್ದಕ್ಕಿದ್ದ ಹಾಗೆ ಆಕಡೆಯಿಂದ ಈ ಕಡೆಗೆ ತಿರುಗಿದಾಗಲೆಲ್ಲಾ ಒಳಗೆ ಕಚಕ್ ಅಂತ ಶಬ್ದ ಬರ‍್ತಿತ್ತು.’
‘ಅಯ್ಯೋ, ಯಾಕಂತೆ?’
‘ಒಳಗೆ ಕತ್ತರಿ ಬಿಟ್ಬಿಟ್ಟಿದ್ರು. ಮತ್ತೆ ಹೊಟ್ಟೆ ಕೊಯ್ದಿದ್ದಾಯ್ತು.’
‘ಆಗ ಸರಿಹೋಯ್ತೂನ್ನಿ.’
‘ಇಲ್ಲ. ಒಳಗೇ ಏನೋ ಚುಚ್ಚಿದಹಾಗೆ ಆಗ್ತಿತ್ತು. ನೋಡಿದ್ರೆ ಸೂಜಿ.’
‘ಮತ್ತೆ ಆಪರೇಷನ್ ಆಯ್ತೂನ್ನಿ.’
‘ಇಲ್ಲ.’
‘ಮತ್ತೆ?’
‘ಹೊಟ್ಟೆ ಮೇಲೆ ಒಂದು ಮ್ಯಾಗ್ನೆಟ್ ಕಟ್ಕೊಂಡ್ಬಿಟ್ಟಿದ್ದಾನೆ. ಈಗ ಸೂಜಿ ಅಲ್ಲಾಡದೆ ಒಂದೇ ಜಗದಲ್ಲೇ ಇರೋದ್ರಿಂದ ನೋವಿಲ್ಲ!’
‘ಒಳಗೆ ರಸ್ಟ್ ಆಗ್ಬಿಟ್ರೆ?’
‘ಆಗಲ್ಲ, ಆಗಾಗ್ಗೆ ಹೊಟ್ಟೆಗೆ ಸ್ವಲ್ಪ ಎಣ್ಣೆ ಬಿಟ್ಕೊಳಕ್ಕೆ ಹೇಳಿದ್ದೀನಿ.’
‘ಹಾಗೇ ಇರೋದು ಒಳ್ಳೇದಲ್ಲ. ತೆಗೆಸಿಕೊಂಡುಬಿಡಕ್ಕೆ ಹೇಳಿ.’
‘ಬೇಡ, ಇನ್ನೇನಾದ್ರೂ ಒಳಗೆ ಬಿಡ್ತಾರೆ. ಇದೇ ವಾಸಿ ಅಂದ.’
‘ನೀವೇನಂದ್ರಿ?’
‘ಆಪರೇಷನ್ ಮಾಡಿಸ್ಕೋ, ಆದರೆ ಹೊಲಿಗೆ ಹಾಕಿಸ್ಕೋಬೇಡ ಅಂದೆ.’
‘ಮತ್ತೆ?’
‘ಝಿಪ್ ಹಾಕಿಸಿದೆ. ಏನೇ ಬಿಟ್ಟಿದ್ರೂ ಝಿಪ್ ಝರ್ ಅಂತ ಎಳೆಯೋದು, ತೆಗೆಯೋದು, ಝಿಪ್ ಎಳೆಯೋದು!’
‘ಸೂಪರ್ ಐಡಿಯ ಅಜ್ಜ. ಆದರೂ, ನಿಮ್ಮ ಕಾಲುನೋವಿಗೆ ಒಮ್ಮೆ ಸರ್ಜನ್‌ನ ನೋಡಿಬಿಡಿ.’
‘ಬೇಡ.’
‘ಯಾಕೆ?’
‘ನಮ್ಮ ಮನೆ ಹತ್ತಿರ ಇರೋ ಸರ್ಜನ್ ಬೋರ್ಡ್ ಹಾಕಿದ್ದಾನೆ.’
‘ಏನಂತ?’
‘ನಮ್ಮಲ್ಲಿ ಶಸಚಿಕಿತ್ಸೆ ಮಾಡಿಸಿಕೊಂಡವರಿಗೆ
ಶ್ರಾದ್ಧದ ಖರ್ಚು ಉಚಿತ ಅಂತ!’
‘ಹೋಗಲಿ ಬಿಡಿ. ನಿಮಗೆ ಆಯುರ್ವೇದಿಕ್ ಟ್ರೀಟ್‌ಮೆಂಟೇ ಕೊಡ್ತೀನಿ.’
‘ಇದ್ದಿದ್ರಲ್ಲಿ ಸ್ವೀಟ್ ಆಗಿರೋ ಲೇಹ್ಯಾನೇ ಕೊಡಿ.’
‘ಏನಾದರೂ ಡ್ರಿಂಕ್ಸ್ ಗಿಂಕ್ಸ್ ಅಭ್ಯಾಸ ಇದೆಯೇನು?’
‘ಈಗಿಲ್ಲ ಡಾಕ್ಟ್ರೆ. ನನಗೆ ಡ್ರಿಂಕ್ಸ್ ತೊಗೊಂಡ್ರೆ ಬಹಳ ನೆಗಡಿ ಆಗತ್ತೆ.’
‘ಡಿಂಕ್ಸ್ ತೊಗೊಂಡ್ರೆ ನೆಗಡಿ ಆಗತ್ತಾ?’
‘ಹೂಂ. ಕುಡಿದು ಬಂದಾಗ ಹೆಂಡತಿ ತಲೆಮೇಲೆ ನೀರು ಸುರೀತಾಳಲ್ಲಾ, ಅದರಿಂದ ನೆಗಡಿ ಆಗತ್ತೆ.’
‘ಓಕೆ. ಅಲ್ಲಿಗೆ ನೋ ಡ್ರಿಂಕ್ಸ್ ಅಂತಾಯ್ತು. ಖಾರ ತಿಂತೀರಾ?’
‘ನನ್ನ ಹೆಂಡತಿ ಮಾತಿನ ಮುಂದೆ ಮೆಣಸಿನಪುಡೀನೂ ಸ್ವೀಟ್ ಡಾಕ್ಟ್ರೆ!’
‘ಅಂದರೆ ಹೆಂಡತಿ ಮಾತು ಕೇಳ್ತೀರಾನ್ನಿ.’
‘ಕೇಳದೆ ಇದ್ರೆ ಕಿವಿ ಆಪರೇಷನ್ ಮಾಡಿಸ್ತೀನಿ ಅಂತಾಳೆ ಡಾಕ್ಟ್ರೆ.’
‘ಡ್ರಿಂಕ್ಸು, ಖಾರ ಇಲ್ಲಾಂದ್ಮೇಲೆ ನಿಮ್ಮ ಕಾಲುನೋವಿಗೆ ಕಾರಣ ವಾಯುಬಾಧೆ ಅಲ್ಲ; ನಿಮ್ಮ ನಿದ್ರೆ ಹೇಗಿದೆ?’
‘ರಿಟೈರಾದ ಸ್ವಲ್ಪ ದಿವಸ ನಿದ್ರೇನೇ ಬರ‍್ತಿರಲಿಲ್ಲ.’
‘ಆಮೇಲೆ?’
‘ನಾನು ವರ್ಕ್ ಮಾಡ್ತಿದ್ದ ಸರ್ಕಾರಿ ಕಚೇರಿಯಿಂದ ನಾನು ದಿನಾ ಕೂತು ನಿದ್ರೆ ಮಾಡ್ತಿದ್ದ ಚೇರ್ ತರಿಸ್ಕೊಂಡೆ. ಅದರಲ್ಲಿ ಕೂತ್ರೆ ಸಾಕು, ಹೈ ಕ್ಲಾಸ್ ನಿದ್ರೆ ಬರತ್ತೆ.’
‘ಸರಿ; ನಿದ್ರೆ, ವಾಯು ಪ್ರಾಬ್ಲಂ ಅಲ್ಲಾಂತಾಯ್ತು. ನಿಮಗೆ ಯಾವಾಗ ನೋವು ಜಸ್ತಿ ಇರತ್ತೆ?’
‘ಶನಿವಾರ, ಭಾನುವಾರ.’
‘ಅದೇನು?’
‘ನನ್ನ ಹೆಂಡತಿ ಕಿಟ್ಟಿ ಪಾರ್ಟಿಗೆ ಹೋಗಿರ‍್ತಾಳೆ.’
‘ಅದಕ್ಕೂ ಇದಕ್ಕೂ ಏನು ಸಂಬಂಧ?’
‘ನಮ್ಮ ಮನೆ ಹಿಂಭಾಗದಲ್ಲಿ ಒಂದು ಲೇಡೀಸ್ ಹಾಸ್ಟೆಲ್ ಇದೆ.’
‘ಸರಿ. ಅದಕ್ಕೂ, ಕಿಟ್ಟಿ ಪಾರ್ಟಿಗೂ, ಕಾಲುನೋವಿಗೂ ಏನು ಸಂಬಂಧ?’
‘ಸುಮ್ಮನೆ ಹಾಗೆ ನಿಂತ್ರೆ ಆ ಹಾಸ್ಟೆಲ್‌ನಲ್ಲಿ ಹುಡುಗಿಯರು ಚೆಲ್ಲುಚೆಲ್ಲಾಗಿ ಆಡೋದು ಕಾಣಲ್ಲ.’
‘ಅದಕ್ಕೆ?’
‘ಒಂದು ಏಣಿ ಹಾಕ್ಕೊಂಡು ನಿಲ್ತೀನಿ.’
‘ಹೂಂ?’
‘ಬಲಗಾಲು ಕಾಂಪೌಂಡ್ ಮೇಲಿರತ್ತೆ, ನೋವಿರಲ್ಲ, ಎಡಗಾಲು ಏಣಿ ಮೇಲಿರತ್ತೆ, ನೋವು ಬರತ್ತೆ!’
‘ತಾತಾ... ಈ ವಯಸ್ಸಲ್ಲೀ... ಹುಡುಗೀರ‍್ನ ಕದ್ದು ನೋಡೋದೂಂದ್ರೆ.... ಛೀ!’
‘ಹಾಗೆಲ್ಲಾ ಬಿಡಕ್ಕಾಗತ್ತಾ, ಇದು ನನ್ನ ಗೋಲ್ಡನ್ ಜ್ಯೂಬಿಲಿ ವರ್ಷ ಗೊತ್ತಾ?’
‘ನಿಮಗೆ ಇನ್ನೂ ಐವತ್ತೇನಾ?’
‘ನನಗಲ್ಲ, ಹುಡುಗೀರ‍್ನ ನೋಡಕ್ಕೆ ಶುರು ಮಾಡಿ ಐವತ್ತು ವರ್ಷ. 16ಕ್ಕೆ ಶುರು ಮಾಡ್ದೆ, ಈಗ 66!’
‘ಟ್ರೀಟ್ಮೆಂಟ್ ಬೇಕಾದ್ದು ನಿಮ್ಮ ಕಾಲಿಗಲ್ಲ, ತಲೆಗೆ. ಗೆಟ್ ಔಟ್. ಯಾವುದಾದರೂ ಹುಚ್ಚಾಸ್ಪತ್ರೇಲಿ ಟ್ರೀಟ್ಮೆಂಟ್ ತೊಗೊಳ್ಳಿ, ಸರಿಹೋಗತ್ತೆ.’
‘ಅಲ್ಲೂ ಹೋಗಿದ್ದೆ. ಸೇರಿಸ್ಕೊಳಲ್ಲಾಂದ್ರು.’
‘ಯಾಕಂತೆ?’
‘ಅಲ್ಲಿ ವಾಸಿಯಾಗೋ ಹುಚ್ಚರನ್ನು ಮಾತ್ರ ಸೇರಿಸ್ಕೊಳ್ತಾರಂತೆ!’
‘ಸರಿ ಅಜ್ಜ. ನಿಮಗೇನು ಟ್ರೀಟ್‌ಮೆಂಟ್ ಕೊಡಬೇಕೂಂತ ಗೊತ್ತಾಯ್ತು. ನಿಮ್ಮ ಮನೆಯ ಫೋನ್ ನಂಬರ್ ಏನು?’
‘ಯಾಕೆ?’
‘ಅಜ್ಜಿಗೆ ಕಿಟ್ಟಿ ಪಾರ್ಟಿ ಮನೇಲೇ ಇಟ್ಕೊಳ್ಳಕ್ಕೆ ಹೇಳ್ತೀನಿ, ನಿಮ್ಮ ಆಟ ಕಟ್ ಆಗಿ, ನೋವು ಮಾಯ ಆಗತ್ತೆ.’
‘ಥ್ಯಾಂಕ್ಯೂ ವೆರಿ ಮಚ್. ನನಗೂ ಅದೇ ಬೇಕಾಗಿತ್ತು.’
‘ಯಾಕೆ?’
‘ಇವಳ ಕಿಟ್ಟಿ ಪಾರ್ಟೀಲಿ ಹಾಸ್ಟೆಲ್ ಹುಡುಗೀರಿಗಿಂತ ಚೆನ್ನಾಗಿರೋವ್ರು ಸೇರ‍್ತಾರೆ. ಥ್ಯಾಂಕ್ಸ್ .
ಒಬ್ಬ ಬೇರೆಯವರಿಂದ,
ಪ್ರತಿಕೂಲ ಪರಿಸ್ಥಿತಿಯಿಂದ ಒತ್ತಡಕ್ಕ
ಒಳಗಾಗಿದ್ದ. ಖಿನ್ನತೆಯಿಂದ
ಬಳಲಿ ಕಂಗೆಟ್ಟಿದ್ದ. ಆದರೂ
ಪರಿಹಾರ ಹುಡುಕುತ್ತದ್ದ.
ಒಂದು ಆತ್ಮಹತ್ಯೆ
ಅಯ್ಯೋ, ಅತ್ಮಹತ್ಯೆ ಮಹಾಪಾಪ,
ಎರಡನೇದು ಕೊಲೆ,
ತನ್ನನ್ನು ಒತ್ತಡಕ್ಕೆ
ತಳ್ಳಿದವರನ್ನು ಮುಗಿಸುವುದು?
ಆದರೆ ಕೊಲೆ ಮಾಡಿದವನಿಗೆ
ಗಲ್ಲು ಅಥವಾ ಕಾರಾವಾಸ
ಕಾಯ್ತಾ ಇರುತ್ತಲ್ಲ, ಬೇಡಪ್ಪಾ,
ಮತ್ತೂ ಯೋಚಿಸಿಯೇ ಯೋಚಿಸಿದ,
ಮೂರನೇ ದಾರಿಯನ್ನು ಹುಡುಕಿದ,
ಅದೇ "ಪಲಾಯನ", ಇದೇ ಸರಿಯೆಂದು,
ತನ್ನನ್ನು ಒತ್ತಡಕ್ಕೆ ಒತ್ತಿಟ್ಟವರಿಂದ,
ತನ್ನನ್ನು ಒತ್ತಡಕ್ಕೆ ತಂದ ಪರಿಸರದಿಂದ,
ಜನರಿಂದ, ದೂರ ಓಡಿಯೇ ಓಡಿದ,
ಪಲಾಯನ ಮಾಡಿ ಬದುಕಿಕೊಂಡ,
ತನ್ನದೇ ಪ್ರಪಂಚ ಕಟ್ಟಿಕೊಂದು
ತನಗಿಷ್ಟು ಶಕ್ತಿ ಕೊಟ್ಟ
ದೇವರನ್ನು ಸ್ಮರಿಸುತ್ತ ಸುಖವಾಗಿದ್ದ..
(ಇದು ಕವಿತೆಯಲ್ಲ - ಅಗತ್ಯವಿದ್ದವರಿಗೆ ಒಂದು ಸಲಹೆ ಅಷ್ಟೆ - ಎಲ್ಲರೂ ಇದನ್ನು ಒಪ್ಪದೇನೂ ಇರ ಬಹುದು..... 🙂 )
.