Friday 15 May 2015

"ಭೂಮಿಗೂ ಬಾನಿಗೂ ಪ್ರತಿ ದಿನ ಲಗ್ನ 
ಗಿಡಮರಗಳೇ ಸಾಕ್ಷಿಗಳು 
ಹಕ್ಕಿಗಳಿಂಚರ ಮಂತ್ರಘೋಷವು 
ರವಿಕಿರಣಗಳು ಹೊನ್ನಿನಾರತಿಯು."

          *****ತಾರಾ ಶೈಲೇಂದ್ರ 

15.05.2015
ನಮ್ಮ ಮನಸ್ಸನ್ನು ನೋಯಿಸಿ
ಘಾಸಿ ಮಾಡಿದವರು, ಕ್ಷಮೆ
ಕೇಳಿದ ಕೂಡಲೇ ಮನಸ್ಸಿಗಾದ
ಗಾಯ ಮಾಯುವಿದಿಲ್ಲ. ಅದು
ಗಾಯ ಮಾಯಲು ಸಹಕರಿಸುವ
ಮುಲಾಮು ಆಗಬಹುದಷ್ಟೆ.
***ದಾರ್ಶನಿಕ.

13.05.2015
ಗಂಟು ಅಂಟಿನ ನಂಟು
ಗೀಜಗನ ಗೂಡು
ಜೇಡನ ಬಲೆ,
ಒಂದು
ಬಿಡಿಸಲಾರದ
ಗಂಟು,
ಇನ್ನೊಂದು
ಬಿಡಿಸಿಕೊಳ್ಳಲಾಗದ
ಅಂಟು.
ಈ ನಂಟು
ಅಂಟುಗಳೆಲ್ಲ,
ಉಂಟು ಇಲ್ಲಗಳ
ಗೊಂದಲಗಳ
ಗೂಡಿನ
ಕಗ್ಗಂಟು.
ಬಿಡಿಸಲಾಗದಷ್ಟು
ಗಟ್ಟಿ ಗಂಟು,
ಬಿಡಿಸಿಕೊಳ್ಳಲೆಳಸಿದಷ್ಟೂ,
ಮತ್ತಷ್ಟು ಅಂಟಿ
ಕೊಳ್ಳುವ ಬಿಗಿ ಅಂಟು,
ಈ ಅಂಟು ಗಂಟುಗಳೇ
ಸೇರಿ ಕೊನೆಗೊಮ್ಮೆ
ಕೊನೆಗಂಟು.
12.05.2015

Saturday 9 May 2015

ಒಂದು ಉತ್ತಮ ಬರಹ ಅನಿಸಿತು. ಕನ್ನಡ ಭೂಮಿ ಗುಂಪಿನಲ್ಲಿ ಶ್ರೀಮತಿ ಪ್ರಮೀಳಾ ಮಂಜುನಾಥ್ ಅವರು ಪೋಷ್ಟ್ ಮಾಡಿದ್ದು. ತಾಳ್ಮೆಯಿಂದ ಓದಿ....ನಿಜವಾಗಿ ಚೆನ್ನಾಗಿದೆ.
________________________________________________________
ಒಂದು ಹಣತೆ : ಒಂದು ಸಣ್ಣ ಕಥೆ!
ಒಂದು ದಿನ ಒಂದು ಮನೆಯ ಹಣತೆಯಲ್ಲಿ ಒಂದು ಚಿಕ್ಕ ಭಿನ್ನಾಭಿಪ್ರಾಯ ಶುರುವಾಯಿತು.
ಹಣತೆ ” ನನ್ನಿಂದ ದೀಪ ಉರಿಯುತ್ತಿದೆ ಆ ಬೆಳಕು ನನ್ನದು ” ಎಂದು ಹೇಳಿತು.
ಇದನ್ನು ಕೇಳಿದ ಹಣತೆಯಲ್ಲಿದ್ದ ಎಣ್ಣೆ ” ನಾನು ಆ ದೀಪಕ್ಕೆ ಜೀವಾಳ.ನಾನೇ ಇರದಿದ್ದರೆ ದೀಪವೂ ಇಲ್ಲ, ಬೆಳಕೂ ಇಲ್ಲ ಅದಕ್ಕಾಗಿ ಆ ಬೆಳಕು ನನಗೆ ಸೇರಿದ್ದು” ಎಂದಿತು.
ಇದನ್ನು ಕೇಳಿದ ಬತ್ತಿ ” Hello! ನಾನು ಉರಿಯುತ್ತಿರುವದಿಂದಲೇ ದೀಪ ಉರಿಯುತ್ತಿದೆ logically ಬೆಳಕು ನನ್ನದು “ಎಂದಿತು
ಈ ಕಚ್ಚಾಟವನ್ನು ಸೂಕ್ಷ್ಮದಿಂದಲೇ ನೋಡುತಿದ್ದ ಗಾಳಿ ” ನಾನು ಇಲ್ಲದೇ ದೀಪವು ಉರಿಯಲ್ಲ , ನಾನು ಹೆಚ್ಚಾದರೆ ದೀಪ ಆರಿಹೋಗುತ್ತದೆ ಆದ್ದರಿಂದ ಬೆಳಕು ನನ್ನದು” ಎಂದು ವಾದಿಸಿತು
ನಾನು ನನ್ನಿಂದ ಎಂಬ ಕಚ್ಚಾಟದಲ್ಲಿ ಹಣತೆ ಹೊಡೆದು ಹೋಯಿತು. ಎಣ್ಣೆ ಹರಿದು ಹೋಯಿತು. ಬತ್ತಿಗೆ ಎಣ್ಣೆಯಿಲ್ಲದೆ ಕುಗ್ಗಿ ಹೋಯಿತು. ಗಾಳಿ ಜೋರಾಗಿ ಬೀಸಿ ಉರಿಯುತ್ತಿದ್ದ ದೀಪ ಆರಿಹೋಯಿತು !
ಎಲ್ಲವೂ ಒಟ್ಟಾಗಿ ಇರುತ್ತಿದ್ದರೆ ಆ ದೀಪದ ಭರವಸೆಯ ಬೆಳಕು ಎಲ್ಲರ ಪಾಲಾಗಿರುತ್ತಿತ್ತು
.
” ಅಹಂ ಭಾವನೆಯಿಂದ ಅಂಧಕಾರವೇ ಹೊರತು ಬೆಳಕಿನ ಸಾನ್ನಿಧ್ಯವಿಲ್ಲ ”
ಆ ಭರವಸೆಯ ಬೆಳಕು ನಿಮ್ಮದಾಗಲಿ ಯುದ್ಧ ಭಾರತದಲ್ಲಿ...
ದ್ರೋಣಾಚಾರ್ಯರು ಯುದ್ಧದಲ್ಲಿ ಮಡಿದ ಮೇಲೆ
"ಸೇನಾಪತಿಯ ಪಟ್ಟ"
ಕರ್ಣನ ಹೆಗಲೇರುತ್ತದೆ....
ಕರ್ಣ.....
ತಾತ ಭೀಷ್ಮನ ಆಶೀರ್ವಾದ ಪಡೆಯಲು ರಣರಂಗಕ್ಕೆ
ಬರುತ್ತಾನೆ...
ಭೀಷ್ಮ ಶರಶಯ್ಯೆಯಲ್ಲಿ ಮಲಗಿರುತ್ತಾನೆ....
ಆತನ ಪಾದಗಳಿಗೆ ಭಕ್ತಿಯಿಂದ ನಮಿಸುತ್ತಾನೆ....
"ತಾತಾ ನನ್ನನ್ನು ಆಶೀರ್ವದಿಸಿ....."....
ಚುಚ್ಚುವ ಬಾಣಗಳ ಮೇಲೆ ಮಲಗಿದ್ದ ಭೀಷ್ಮನಿಗೆ ...
ಕರ್ಣನ ಕಂಡು ಮತ್ತಷ್ಟು ನೋವಾಗುತ್ತದೆ...
ಮನಸ್ಸು ಘಾಸಿಯಾಗುತ್ತದೆ...
"ಕರ್ಣಾ...
ಕೊಡಲಿಕ್ಕೆ ನನ್ನ ಬಳಿ ಏನೂ ಇಲ್ಲ...
ನಿನಗೆ ಆಶೀರ್ವಾದ ಮಾಡಲಿಕ್ಕೆ ನನ್ನ ಬಳಿ ಶಬ್ಧಗಳಿಲ್ಲ...."
"ತಾತ
ನನಗೆ ಗೊತ್ತು...
ನಾನು ಹೀನ
ಕುಲದವನೆಂದು ಬದುಕಿನುದ್ದಕ್ಕೂ ಪೆಟ್ಟು ತಿಂದಿದ್ದೇನೆ...
ನೋವು ಉಂಡಿದ್ದೇನೆ...
ನನ್ನ ಹುಟ್ಟು..
ನನ್ನ ಕುಲ..
ಜಾತಿ ನನಗೆ ಶಾಪವಾಗಿದೆ....
ಬಂಧು..
ಬಾಂಧವರು ಎಲ್ಲರೂ ನನ್ನನ್ನು ಜರೆದಿದ್ದಾರೆ..
ತೆಗಳಿದ್ದಾರೆ.. ಹೀಯಾಳಿಸಿದ್ದಾರೆ....
ಪ್ರತಿ ಕ್ಷಣ ಕ್ಷಣವೂ ನನ್ನನ್ನು ತುಳಿದಿದ್ದಾರೆ...."
ಚುಚ್ಚಿದ
ಬಾಣಗಳ ನೋವಿನಲ್ಲೂ ಭೀಷ್ಮ ನಗುತ್ತಾನೆ...
"ಕರ್ಣಾ..
ನಿನ್ನನ್ನು ಕೀಳು ಜಾತಿಯವ ಎಂದು ಜರೆದವರು ಯಾರು ?...."
"ಇನ್ಯಾರು... ?
ಎಲ್ಲರೂ...
ಪಾಂಡವರು..
ಗುರು ದ್ರೋಣರು.... ಒಬ್ಬರೂ ಬಿಡಲಿಲ್ಲ...."ಸೂತ ಪುತ್ರ"
ಎಂದು ತುಳಿದಿದ್ದಾರೆ ...
ನನ್ನ ಜಾತಿಯಿಂದಾಗಿ ...
ನನಗೆ ಕಲಿಸಿದ ಗುರುವೂ ನನ್ನನ್ನು ಶಪಿಸಿದರು...."
"ಕರ್ಣಾ...
ನಿಜಕ್ಕೂ ನೀನೊಬ್ಬ ಹುಚ್ಚ...
ಪಾಂಡವರು
ನಿನ್ನ ಬಿಲ್ಲು ವಿದ್ಯೆಯ ಪ್ರತಿಭೆಯನ್ನು ನೋಡಿ ...
ನಿನ್ನ ಜಾತಿಯನ್ನು ಹುಡುಕಿ ತೆಗೆದು ಜರೆದಿದ್ದಾರೆ....
ಗುರು ದ್ರೋಣರಿಗೆ
ಅರ್ಜುನನನ್ನು ದೊಡ್ಡ ಮನುಷ್ಯನನ್ನಾಗಿ ಮಾಡಬೇಕಿತ್ತು...
ಹಾಗಾಗಿ ಅವರು ನಿನ್ನನ್ನು ಶಿಷ್ಯನನ್ನಾಗಿ ಸ್ವೀಕರಿಸಲಿಲ್ಲ...
ಅಲ್ಲಿ ನಿನ್ನ ಜಾತಿಯನ್ನು ನೆಪವನ್ನಾಗಿಟ್ಟುಕೊಂಡರು...
ಕರ್ಣಾ...
ಅವರೆಲ್ಲ ಜರೆದದ್ದು ನಿನ್ನ ಜಾತಿಯನ್ನಲ್ಲ....
ನಿನ್ನ ಪ್ರತಿಭೆಯನ್ನು...!
ಅವರೆಲ್ಲರಿಗೂ ನಿನ್ನ ಸಾಮರ್ಥ್ಯವನ್ನು ತುಳಿಯಬೇಕಾಗಿತ್ತು....!
ನೀನೊಬ್ಬ ಹುಚ್ಚಾ ಕರ್ಣಾ...."
"ತಾತಾ...
ನಿಮ್ಮ ಮಾತನ್ನು ನಾನು ಹೇಗೆ ಒಪ್ಪಲಿ ?
ಕ್ಷಣ ಕ್ಷಣಕ್ಕೂ ನನ್ನ ಜಾತಿ..
ಕುಲದ ಹೆಸರಿನಲ್ಲಿ ತುಳಿಸಿಕೊಂಡವನು ನಾನು...
ಆ ನೋವು ನನಗೆ ಗೊತ್ತು....
ನಾನು ಸೂತ ಪುತ್ರನಾಗಿರದಿದ್ದರೆ
ನಾನು ಈ ಮಾತುಗಳನ್ನು ಕೇಳುವ ಅವಶ್ಯಕತೆ ಇಲ್ಲವಾಗಿತ್ತು...
ನನ್ನ ಕುಲ ನನ್ನನ್ನು ತುಳಿದಿದೆ ತಾತಾ..."
ಭೀಷ್ಮ ಆ ನೋವಿನಲ್ಲೂ ಮತ್ತೆ ನಕ್ಕ....
" ಹುಚ್ಚಪ್ಪಾ..
ವೇದವ್ಯಾಸರು ನಿನ್ನದೇ ಜಾತಿಯಲ್ಲವೆ ?
ಋಷಿ ವಾಲ್ಮೀಕಿ... ಕೀಳು ಜಾತಿಯರಲ್ಲವೆ ?
ಅಷ್ಟೇಕೆ ?
ಜಗತ್ತೇ ಪೂಜಿಸುತ್ತಿರುವ ಶ್ರೀಕೃಷ್ಣ ಯಾವ ಜಾತಿಯವನು ?...
ಕರ್ಣಾ..
ನಿನಗೊಂದು ಮಾತು ಹೇಳುತ್ತೇನೆ ಕೇಳು...
ಈ ಜಗತ್ತಿನ ಪ್ರತಿಯೊಂದೂ ಪ್ರತಿಭೆಗೂ ಕಷ್ಟಗಳಿವೆ..
ಪ್ರತಿಯೊಂದೂ
ಪ್ರತಿಭೆಯ ಸುತ್ತಲೂ...
ಅದನ್ನು ತುಳಿಯಲು ಕಾದಿರುವ
ದ್ವೇಷ...
ಅಸೂಯೆ.. ಈರ್ಷ್ಯೆ.. ಹೊಟ್ಟೆಕಿಚ್ಚು ಸಮಯ ಕಾಯುತ್ತಿರುತ್ತವೆ...
ಅವುಗಳು ಪ್ರತಿಭೆಯನ್ನು ತುಳಿಯಲು ನೆಪಗಳನ್ನು ಹುಡುಕುತ್ತವೆ...
ಕೃಷ್ಣನ ಬದುಕನ್ನು ನೋಡು...
ಅವನ ಹುಟ್ಟು...
ಬಾಲ್ಯ.. ಯೌವ್ವನದ ಪ್ರತಿ
ಕ್ಷಣದಲ್ಲೂ ಅವನನ್ನು ತುಳಿಯಲು ಹೊಟ್ಟೆಕಿಚ್ಚುಗಳಿರಲಿಲ್ಲವೆ ?
ಪ್ರತಿಭೆಯ ಜೊತೆಗೆ ವಿವೇಕವಿರಬೇಕು...
ಹಠದ ಜೊತೆ ತಪ್ಪು ದಾರಿ ತುಳಿಯದ
ಸತ್ಯ ನಡತೆಯಿರಬೇಕು...
ಶ್ರೀಕೃಷ್ಣ..
ತನ್ನ ಕುಲವನ್ನೇ ಶ್ರೇಷ್ಠ ಕುಲನ್ನಾಗಿ ಮಾಡಲಿಲ್ಲವೆ ?"
ಕರ್ಣ ತಲೆ ತಗ್ಗಿಸಿ ನಿಂತಿದ್ದ...
"ಕರ್ಣಾ...
ನೀನು
ನಿನ್ನನ್ನು "ಸೂತ ಪುತ್ರ" ಎಂದು ಜರೆದ ಜನರನ್ನಷ್ಟೇ ನೋಡಿದೆ..
ಅವರಾಡಿದ ಮಾತಿನ ಮರ್ಮದ ಹಿಂದಿನ ಅರ್ಥವನ್ನು ಹುಡುಕುವ ಪ್ರಯತ್ನ
ಮಾಡಲಿಲ್ಲ...
ನಿನ್ನ ಬದುಕಿನಲ್ಲಿ
ನಿನಗಾದ ಅನ್ಯಾಯವನ್ನು ಸರಿ ಪಡಿಸಲು ನೀನು ಮಾಡಿದ್ದೇನು ?
ದುಷ್ಟ..
ದುರುಳ ಕೌರವನ ಸ್ನೇಹ ಮಾಡಿದೆ...
ಅವನ ಕೆಟ್ಟ ಕೆಲಸಗಳಲ್ಲಿ ಭಾಗಿಯಾದೆ...
ನಿನಗೆ
ಪ್ರತಿ ಕ್ಷಣದಲ್ಲೂ ನಿನಗೆ ಸಹಾಯ ಮಾಡಲು..
ಮಾರ್ಗದರ್ಶನ ಮಾಡಲು ನಿನ್ನ ತಂದೆ ಸೂರ್ಯದೇವನಿದ್ದ...
ಜಗತ್ತಿಗೆ ಬೆಳಕು ಕೊಡುವ ಸೂರ್ಯನ ಮಾರ್ಗದರ್ಶನ
ನೀನು ಪಡೆಯಬಹುದಾಗಿತ್ತು...
ಕರ್ಣಾ..
ವಾಲ್ಮೀಕಿಯಂತೆ...
ವ್ಯಾಸರಂತೆ..
ಶ್ರೀಕೃಷ್ಣನಂತೆ ....
ನೀನು ನಿನ್ನ ಕುಲದ ಶ್ರೇಷ್ಠನಾಗಿ...ಹೆಮ್ಮೆಪಡಬಹುದಾಗಿತ್ತು...
ನಿನ್ನ ಪ್ರತಿಭೆಯನ್ನು...
ನಿನ್ನ ಬದುಕನ್ನು ನೀನೇ ಕೈಯ್ಯಾರೆ ಹಾಳುಮಾಡಿಕೊಂಡೆ...
ನಿನ್ನ ಇಂದಿನ ದುರಂತಕ್ಕೆ ಜಾತಿಯನ್ನು ಹಳಿಯಬೇಡ...
ನಿನ್ನ ನಿರ್ಧಾರಗಳನ್ನು ಹಳಿದುಕೊ....
ಜಗತ್ತಿನ
ಯಾವ ಪ್ರತಿಭೆಯೂ ಸುಲಭದಲ್ಲಿ ಪ್ರಖರವಾಗುವದಿಲ್ಲ...
ಪ್ರತಿಭೆಗಳು ಕಷ್ಟ ಪಡಲೇಬೇಕು....
ಬೆಂಕಿಯಲ್ಲಿ ಬೆಂದರೆ ಮಾತ್ರ ಬಂಗಾರವಾಗಲು ಸಾಧ್ಯ...."
:::::::::::::::::::::::::::::
ಪ್ರತಿಭೆ ಇದ್ದರೆ ಸಾಲದು....
ಅದರ ಜೊತೆಗೆ ವಿವೇಕವಿರಬೇಕು...
ಹಠವಿರಬೇಕು... ಸಾಧನೆ ಇರಬೇಕು....
ಸತ್ಯ ನಡತೆಯಿರಬೇಕು....
ಅಂಥಹ ಪ್ರತಿಭೆಗಳು ಮಾತ್ರ ಪ್ರಜ್ವಲಿಸುತ್ತವೆ.

09.05.15
"ನಾನು ಇಲ್ಲಿ ಯಾಕೆ
ಇನ್ನೂ ಇದ್ದೇನೆ ಅಂದರೆ,
ಅಲ್ಲಿಗೆ ಹೋಗಲು ಇನ್ನೂ
ಪಾಸ್ಪೋರ್ಟ್ ಮತ್ತು
ವೀಸಾ ಬಂದಿಲ್ಲ"
****ದಾರ್ಶನಿಕ

09.05.15

Friday 8 May 2015

ಯಾವ ಸ್ವಾಮಿಗಳಿರಲಿ,
ಯಾವ ಗುರುಗಳಿರಲಿ
ಕೊನೆಗೊಂದು ದಿನ
ಜನ ಕಟ್ಟುವುದು,ಅವರ
ಮೇಲೆ ಸಮಾಧೀನೇ..
*****ದಾರ್ಶನಿಕ.

09.05.2015
ಆಸೆ - ಬಯಕೆ
ಅಪ್ಪಿ ಮುದ್ದಾಡುವ ಆಸೆ,
ಜೀವನದ ಕಷ್ಟಗಳನ್ನು
ಬಿಗಿದಪ್ಪಿಕೊಂಡು
ಆಟ ಆಡುವ ಆಸೆ,
ಆಗಲಾದರೂ ಕಷ್ಟಗಳು
ಕೊಸರಿಕೊಂಡು
ಓಡಿ ಹೋಗಿ
ಎಣಿಸದ ಸುಖಕ್ಕೆ
ದಾರಿಯಾಗುವುದೇನೋ
ಎಂಬ ಮನದ ಮೂಲೆಯಲ್ಲಿ
ಇಣುಕುವ ಬಯಕೆ.
08.05.2015


ತಂದೆಯ ಮಹಾನತೆ ಗೊತ್ತಾಗ ಬೇಕಾದರೆ ಸ್ವತಃ ತಂದೆಯಾಗ ಬೇಕು......
ತನ್ನ ಕೋಪ ತಾಪಗಳನ್ನು,
ರಾಗ ದ್ವೇಷಗಳನ್ನು
ಹದ್ದುಬಸ್ತಿನಲ್ಲಿ ಇಟ್ಟು
ಕೊಳ್ಳಲಾರದ ವ್ಯಕ್ತಿ
ಯಾವ ದೇವರ ಭಕ್ತಿ
ಮಾಡಿದರೂ ಪ್ರಯೋಜನವಿಲ್ಲ.
****ದಾರ್ಶನಿಕ

07.05.2015

Wednesday 6 May 2015

ತರಲೆ ಕಾವ್ಯ.....!!
ಸಖಿ.....
ಅಪ್ಪನ ತಲೆಯಲಿ
ಬೆಳ್ಳಿ ಕೂದಲ ಕಂಡು
ಬೆರಗಾಗಿ ಕೇಳಿತು ಕಂದಾ
"ಅಪ್ಪಾ ಅಪ್ಪಾ
ಕಪ್ಪು ತಲೆಯಲಿ
ಬಿಳಿ ಕೂದಲು ಯಾಕಪ್ಪಾ?.."
"ಅಯ್ಯೋ ಕಂದಾ
ನೀನೀಗ ಹುಸಿಯಾಡುವುದು
ಕಲಿತಿರುವೆ
ಮಗ ಹೇಳುವ ಪ್ರತಿ
ಸುಳ್ಳಿಗೊಂದೊಂದು ಅಪ್ಪನ
ಕೂದಲು ನೆರೆಯುವುದು.."
ಅಪ್ಪನ ಮಾತು ಕೇಳಿದ
ಕಂದ ಅಚ್ಚರಿಯಿಂದ
ಪ್ರಶ್ನಿಸಿತು....
"ಹೌದಾ ಅಪ್ಪಾ
ಗೊತ್ತಾಯ್ತು ಈಗ
ತಾತನ ತಲೆಯಾಕೆ
ಪೂರ್ತಿ ಬೆಳ್ಳಗೆ..
ಹಾಗಾದರೆ ಹೇಳು
ನೀನೆಷ್ಟೊಂದು ಸುಳ್ಳು
ಹೇಳಿರುವೆ...."
ಬೆಪ್ಪಾದ ಅಪ್ಪನ
ಬಾಯಿ ಕಟ್ಟಿತು,
ಬೊಚ್ಚುಬಾಯಿಯ ಅಜ್ಜ
ಮುಸಿಮುಸಿ ನಕ್ಕಿತು...
ಮಕ್ಕಳ ಮುಂದೆ
ಅತಿಜಾಣತನ ಸಲ್ಲದು
ಎಂಬುದೇ ಈ ತರಲೆ
ಕವಿತೆಯ ಅರ್ಥವು.....!!!
-ಯಡಹಳ್ಳಿ


ತನ್ನ ಕೋಪ ತಾಪಗಳನ್ನು,
ರಾಗ ದ್ವೇಷಗಳನ್ನು
ಹದ್ದುಬಸ್ತಿನಲ್ಲಿ ಇಟ್ಟು
ಕೊಳ್ಳಲಾರದ ವ್ಯಕ್ತಿ
ಯಾವ ದೇವರ ಭಕ್ತಿ
ಮಾಡಿದರೂ ಪ್ರಯೋಜನವಿಲ್ಲ.
****ದಾರ್ಶನಿಕ

7.05.2015

ಮುದ್ದು ಪಾದಗಳು
ಈ ಹಸು ಕಂದನ
ಮುದ್ದು ಪಾದಗಳು,
ನಸುಗೆಂಪು ಬಣ್ಣದ
ನಳ ನಳಿಸುವ ಪುಷ್ಪಗಳು
ಬೆಳ್ಳಿ ಕಾಲ್ಗಡಗಗಳ
ಶೃಂಗಾರದೊಡವೆಗಳು,
ಇನ್ನೂ ಭೂಮಿಯನು ಸೋಕಿಲ್ಲ
ಸ್ವಲ್ಪವೂ ಮಲಿನವಾಗಿಲ್ಲ,
ಅಮ್ಮನಪ್ಪುಗೆಯಲ್ಲಿ,
ಬೆಚ್ಚಗಿವೆ ಇನ್ನೂ,
ಭೂದೇವಿ ಕಾಯುತಿಹಳು
ಎಂದು ಮುಡಿಯಲಿ
ಈ ಹೂಗಳನೆಂದು.
ಬಾಳು ಬೆಳಗಲಿ ನಿಂದು,
ನಾನು ಕಾಯಿತಿಹೆ
ತವಕದಲಿ ನಿಂದು,
ನಿನ್ನನೆಂದು ಕೈ ಹಿಡಿದು
ನಡೆಸಿ ಧನ್ಯನಾಗಲಿಯೆಂದು.
23.04.2015

Tuesday 5 May 2015

ಭೋಜನವೇ ಮಹಾ ಯಜ್ಞ... smile emoticon
================
ಊಟ ಅನ್ನೋದು ಒಂದು ಯಜ್ಞ.
ಬಾಯಿಯೇ ಯಜ್ಞಕುಂಡ.
Sense organ ಗಳೇ ದೇವತೆಗಳು.
ಆಹಾರ ಪದಾರ್ಥಗಳೇ ಹವಿಸ್ಸು.
ಜಠರಾಗ್ನಿಯೇ ಅಗ್ನಿ ದೇವತೆ.
ಮಜ್ಜಿಗೆಯೇ ಪೂರ್ಣಾಹುತಿ.
ಮೊಬೈಲ್ ಕಾಲ್,TV ದರ್ಶನ,
disturbanceಗಳೇ ಯಜ್ಞಭಂಗ.!!!!

05.05.2015 (ಗೆಳೆಯ ಮಹಾಬಲೇಶ್ವರ ಭಟ್ಟರಿಂದ ಶೇರ್ ಮಾಡಿದ್ದೂ )
ಜೀವನದಲ್ಲಿ ಮನ ಬಿಚ್ಚಿ
ನಗಲೂ ಸಮಯವಿಲ್ಲದಷ್ಟು
ವ್ಯಸ್ತ((busy)ರಾಗ ಬಾರದು.
*******ದಾರ್ಶನಿಕ

05.05.2015
ಅತಿ ಶಿಸ್ತಿನ ದುಷ್ಪರಿಣಾಮ......ಅಥವಾ ತಿರುಗುಬಾಣವೆನ್ನೋಣವೇ? smile emoticon
++++++++++++++++++++++++++++++++++++++++++
ಊಟಕ್ಕಿಂತ ಮುಂಚೆ ತಂದೆ ಮಗನಿಗೆ ಹೇಳ್ತಾನೆ "ಮೌನವಾಗಿ ಊಟ ಮಾಡಬೇಕು.ಮಧ್ಯ ಮಾತನಾಡಬಾರದು" ಮಗ ತಲೆಯಾಡಿಸಿದ.
ಊಟದ ಮಧ್ಯದಲ್ಲಿ ಮಗ ಎರಡು ಸರ್ತಿ "ಅಪ್ಪಾ ಅಪ್ಪಾ"
ಅಂತ ಮಾತನಾಡಿಸುವ ಪ್ರಯತ್ನ ಮಾಡ್ತಾನೆ.ತಂದೆ ಮಾತನಾಡಲ್ಲ.ಗದರಿಸುವ ನೋಟದಿಂದ ದಿಟ್ಟಿಸಿ ನೋಡ್ತಾನೆ.ಊಟದ ನಂತರ ಕೇಳ್ತಾನೆ "ಏನು" ಅಂತ.
ಮಗ ಹೇಳ್ತಾನೆ "ನಿಮ್ಮ ಸಾಂಬಾರಿನಲ್ಲಿ ಜಿರಲೆ ಬಿದ್ದಿತ್ತು.."
++++++++++++++++++++++++++++++++++++

05.05.2015
ಪ್ರೇಮ, ಪ್ರೀತಿ, ಹೃದಯದ ಮಿಡಿತ............
===========================
"ನಮ್ಮ ಹೃದಯ ಬೇರೆಯವರಿಗಾಗಿ ಮಿಡಿಯುವುದು ನಮಗೆ ಮಾತ್ರ ಗೊತ್ತಾಗುತ್ತದೆ. ಆದರೆ, ಬೇರೆಯವರ ಹೃದಯ ನಮಗೋಸ್ಕರ ನಿಜವಾಗಿ ಮಿಡಿಯುತ್ತದೆಯೋ ಅಥವಾ ಅದು ಸೋಗಿನ ಮುಖವಾಡದ ಮಿಡಿತವೋ ಗೊತ್ತಾಗುವುದಿಲ್ಲ...... ಇದೇ ಈ ಪ್ರೇಮ, ಪ್ರೀತಿಗಳ ಹೆಸರಿನಲ್ಲಿ ಆಗುವ ದುರಂತಗಳಿಗೆ ಕಾರಣವೇನೋ. ಅದಕ್ಕೇ ಒಬ್ಬ ವಿತಂಡವಾದಿಯ ಪ್ರಕಾರ 'ಈ ಪ್ರೇಮ, ಪ್ರೀತಿಯೆಲ್ಲಾ ಸುಳ್ಳು......ಮದುವೆಯೊಂದು ಸೃಷ್ಟಿಯ ನೈಸರ್ಗಿಕ ಅವಶ್ಯಕತೆ.....ನಂತರದ ಹೊಂದಾಣಿಕೆಯೇ ಜೀವನ......ಕೊನೆಗೊಂದು ದಿನ ಕೊನೆಯ ಪಯಣ.....
ಅವರವರ ಕರೆ ಬಂದಾಗ........ ಅದೂ ಬೇರೆ ಬೇರೆಯಾಗಿ'......"
++++++++++++++++++++++

05.05.2015
ಅತ್ಯಂತ ಮಾರ್ಮಿಕ ಹಾಗು ಹೃದಯಸ್ಪರ್ಶಿ ಬರಹ. ಎಲ್ಲಾ ಪಾಲಕರು, ಅದರಲ್ಲೂ ತಂದೆಯರು,ಅದರಲ್ಲೂ ಚಿಕ್ಕ ಮಕ್ಕಳ ತಂದೆಯರು,
ತಾಳ್ಮೆಯಿಂದ ಓದಿ ಅನುಸರಿಸಲೇ ಬೇಕಾದ ಬರಹ. ಜೀವನದ ಗುರಿ ಕೇವಲ ಕೆಲಸ ಮತ್ತು ಹಣ ಸಂಪಾದನೆ ಒಂದೇ ಅಲ್ಲ.
"ನಮ್ಮ ಬದುಕು ನಮ್ಮದು ಮಾತ್ರವಲ್ಲ, ಅದಕ್ಕೆ ಒಂದಿಷ್ಟು ಪಾಲುದಾರರೂ ಇದ್ದಾರೆ"
ಅದೆಷ್ಟು ಸುಂದರ ಸತ್ಯ ಈ ನುಡಿ.........
(ಸ್ನೇಹಿತ, Aakash Aakash ಅವರದ್ದು ಈ ಬರಹ. ತುಂಬಾನೇ ಇಷ್ಟವೆನಿಸಿದ್ದರಿಂದ ಇಲ್ಲಿ copy paste ಮಾಡಿ share ಮಾಡಿದ್ದೇನೆ...ಅವರನ್ನು ಕೇಳದೆ..... smile emoticon )
"ಅನನ್ಯವಾದ ಜೀವನ ದರ್ಶನದ ಅನುಭವ"
*****************************************
ಮಗ : ಅಪ್ಪ .. ನಾನೊಂದು ಪ್ರಶ್ನೆ ಕೇಳಲೇ ..?
ಅಪ್ಪ : ಹ್ಹ, ಕೇಳು…
ಮಗ : ನಿಮ್ಮ ಒಂದು ಗಂಟೆಯ ಸಂಪಾದನೆಯೆಷ್ಟು
ಅಪ್ಪಾ … ?!
ಅಪ್ಪ : (ಕೋಪದಿಂದ) ನಿನಗ್ಯಾಕೆ ಅದೆಲ್ಲ …?
ಮಗ : ನನಗೆ ಗೊತ್ತಾಗಬೇಕು .. ಪ್ಲೀಸ್ ಅಪ್ಪ … ಹೇಳು … ನಿಮ್ಮ ಒಂದು ಗಂಟೆಯ ಸಂಪಾದನೆಯೆಷ್ಟು ?
ಅಪ್ಪ : (ಕೋಪವನ್ನು ನಿಯಂತ್ರಿಸುತ್ತಾ)ಒಂದು ಸಾವಿರ ರೂಪಾಯಿ..
ಮಗ : ಓಹ್ (ತಲೆ ತಗ್ಗಿಸುತ್ತಾ)
ಮಗ: ಅಪ್ಪಾ , ನನಗೆ ಐನೂರು ರುಪಾಯಿ ಕೊಡ್ತಿಯಾ, ಪ್ಲೀಸ್..
ಮಗನ ಈ ಪ್ರಶ್ನೆ ಕೇಳಿದ್ದೆ ತಡ ತಂದೆ ಕೆಂಡಾಮಂಡಲನಾದ.
ಅಪ್ಪ : (ಏರು ದನಿಯಲ್ಲಿ) ಓಹೋ .. ಗೊತ್ತಾಯ್ತು … ಯಾವುದೊ ಅಂಗಡಿಯಲ್ಲಿ ನೋಡಿದ ಆಟಿಕೆ ಖರೀದಿಸಲು ನಿನಗೆ ದುಡ್ಡು ಬೇಕು ಆಲ್ವಾ .. ಹೋಗು .. ತಾಯಿ ಹತ್ರ ಹೋಗಿ ಬಿದ್ಕೋ … ಏನು ಅಂತ ಅನ್ಕೊಂಡಿದ್ದೀಯ .. ಎರಡು ದಿವಸದಲ್ಲಿ ಮುರಿದು ಹಾಕ್ಲಿಕ್ಕೆ ನಾನು ಕಷ್ಟಪಟ್ಟು ಸಂಪಾದಿಸಿದ ಹಣ ಬೇಕಾ ನಿಂಗೆ…?. ಆ ದುಡ್ಡಿನ ಹಿಂದಿನ ಶ್ರಮ ಏನು ಅಂತ ನಿಂಗೆ ಗೊತ್ತಾ…? ನನ್ನ ತಲೆ ಕೆಡಿಸ್ಬೇಡ.. ಹೋಗು…
ಮಗು ಮರುಮಾತನಾಡದೆ ನೇರ ಬೆಡ್ ರೂಂಗೆ ಹೋಗಿ ಬಾಗಿಲು ಹಾಕಿಕೊಂಡ .ಅಪ್ಪ ಮಗ ಏನೋ ಕೇಳಬಾರದನ್ನು ಕೇಳಿದನೆಂದು ನಖಶಿಖಾಂತ ಉರಿದುಹೋದ.. ‘ಅವನಿಗೆ ಧೈರ್ಯ ಆದರೂ ಹೇಗೆ ಬಂತು ಅಂತಹ ಪ್ರಶ್ನೆ ಕೇಳಿ ನನ್ನಿಂದ ದುಡ್ಡು ಪಡೆಯಲು….’ ಅವನ ಮತ್ತಷ್ಟು ಉದ್ರಿಕ್ತನಾದ ..
ಕೆಲ ಸಮಯದ ಬಳಿಕ ಅವನ ಕೋಪ ಕರಗಿತು.. ಅವನು ಯೋಚಿಸಲು ಆರಂಭಿಸಿದ.. ನನ್ನ ಮಗ ಯಾವತ್ತು ನನ್ನಲ್ಲಿ ದುಡ್ಡು ಕೇಳಿದವನಲ್ಲ.. ಐನೂರು ರುಪಾಯಿ ಏನಾದ್ರೂ ತುಂಬಾ ಅವಶ್ಯ ವಸ್ತುವನ್ನು ಖರೀದಿಸಲು ಆಗಿರಬಹುದೇನೋ… ಅವನು ಯೋಚಿಸುತ್ತಲೇ ಇದ್ದ. ನನ್ನ ಮಗನಲ್ಲಿ ನಾನು ಆ ರೀತಿ ನಡೆದುಕೊಳ್ಳಬಾರದಿತ್ತು … ಛೆ ! ಎಂತಹಾ ತಪ್ಪು ಮಾಡಿಬಿಟ್ಟೆ…ತಂದೆ ಮೆಲ್ಲನೆ ಮಗನ ಬೆಡ್ ರೂಮಿನ ಬಾಗಿಲ ತೆರೆದು ಒಳಹೊಕ್ಕ.
ಅಪ್ಪ : ಮಲಗಿದ್ದೀಯ ಮಗು… ?!
ಮಗ : ಇಲ್ಲಪ್ಪ .. ನಿದ್ದೆ ಬರ್ತಾ ಇಲ್ಲ
ಅಪ್ಪಾ ..ಅಪ್ಪ : ನಾನು ತುಂಬಾ ಕೆಟ್ಟದಾಗಿ ನಡೆದುಕೊಂಡೆ ಮಗೂ.. ಈ ಕೆಲಸದ ಒತ್ತಡ…. ಯಾರದೋ ಮೇಲಿನ ಕೋಪವನ್ನು ನಿನ್ನ ಮೇಲೆ ತೀರಿಸಿಬಿಟ್ಟೆ.. ಹೋಗ್ಲಿ ಬಿಡು…. ತಗೋ ಮಗು.. ನೀನು ಕೇಳಿದ ಐನೂರು ರೂಪಾಯಿ…
ಮಗು ಛಕ್ಕನೆ ಎದ್ದು ಕುಳಿತ… ಅವನ ಕಂಗಳು ಇಷ್ಟಗಲ ಅರಳಿದವು. ನೋಟನ್ನು ಎದೆಗೆ ಅವಚಿಕೊಳ್ಳುತ್ತಾ “ಥಾಂಕ್ ಯೂ ವೆರಿ ಮಚ್ ಅಪ್ಪಾ ..!” ಎಂದವನೇ ಅವಸರದಿಂದ ತನ್ನ ತಲೆ ದಿಂಬಿನ ಕೆಳಗಿನಿಂದ ಹರಕಲಾಗಿ ಮಡಚಿಟ್ಟಿದ್ದ ಮತ್ತಷ್ಟು ನೋಟನ್ನು ಹೊರ ತೆಗೆದು ಮುಗ್ಧವಾಗಿ ಎಣಿಸತೊಡಗಿದ. ಮಗನಲ್ಲಿ ಇನ್ನಷ್ಟು ದುಡ್ಡನ್ನು ಕಂಡ ತಂದೆಯ ಮುಖ ಮತ್ತ್ತೆ ಕೆಂಪೇರಿತು.
ಅಪ್ಪ : ನಿನ್ನಲ್ಲಿ ದುಡ್ಡು ಇದ್ದರೂ ಮತ್ಯಾಕೆ ನನ್ನಲ್ಲಿ ಕೇಳಿದೆ…?
ಮಗ : ಯಾಕೆಂದರೆ ನನ್ನಲ್ಲಿ ಬೇಕಾದಷ್ಟು ಹಣ ಇರಲಿಲ್ಲ. ಈಗ ಬೇಕಾದಷ್ಟಾಯಿತು.
ಈ ಮಾತನ್ನು ಹೇಳುವಾಗ ಮಗನ ಮುಖ ಸಂತಸದಿಂದ ರಂಗೇರಿತ್ತು .ತಂದೆ ಮಗನ ಮುಖವನ್ನುಶೂನ್ಯ ಭಾವದಿಂದ ದಿಟ್ಟಿಸಿದ .
ಮಗ ತನ್ನ ಮಾತನ್ನು ಮುಂದುವರೆಸಿದ ...
“ಅಪ್ಪಾ ನನ್ನಲ್ಲೀಗ ಒಂದು ಸಾವಿರ ರೂಪಾಯಿ ಇದೆ, ನಿನ್ನ ಸಮಯದಿಂದ ಒಂದು ಗಂಟೆಯನ್ನು ನನಗೆ ಕೊಡು. ನಾಳೆ ಮನೆಗೆ ಬೇಗ ಬಾ.. ನನಗೆ ನಿನ್ನ ಜೊತೆ ಊಟ ಮಾಡ್ಬೇಕು….
”ತಂದೆ ಕುಳಿತಲ್ಲೇ ಅಚೇತನನಾದ. ಅವನು ಆ ಪ್ರಶ್ನೆಗೆ ಉತ್ತರಿಸಲಾಗದೆ ತತ್ತರಿಸಿದ. ಅವನ ದೇಹ ಪ್ರಶ್ನೆಯ ತೀಕ್ಷ್ಣತೆಯನ್ನು ತಡೆಯಲಾರದೆ ಬೆವರಿತು. ಉಮ್ಮಡಿಸಿ ಗಂಟಲುಬ್ಬಿ ಮಾತು ಹೊರಡದಾಯಿತು. ಕೂಡಲೇ ತನ್ನೆರಡು ಕೈಗಳನ್ನು ಬಾಚಿ ಮಗನನ್ನು ತಬ್ಬಿಕೊಂಡ ಅವನು ಮಗನ ಹಣೆಗೆ ಮುತ್ತಿಟ್ಟು ಗೊಳೋ ಅಂತ ಅಳತೊಡಗಿದ
ಹಣವೆಂಬ ಅಮೂರ್ತ ಮೌಲ್ಯದ ಹಿಂದೆ ಓಡಿ ಸಂಬಂದಗಳನ್ನು ಕಾಲ ಕಸದಂತೆ ಮಾಡಿದ ಎಲ್ಲ ಹೆತ್ತವರಿಗೊಂದು ಎಚ್ಚರಿಕೆಯ ಕರೆಘಂಟೆ ಇದು. ಜೀವನದ ನಾಗಾಲೋಟದಲ್ಲಿ ನಮ್ಮನ್ನು ಇಷ್ಟಪಡುವವರಿಗಾಗಿ ಒಂದಿಷ್ಟು ಕ್ಷಣವನ್ನು ಮೀಸಲಿಡಿ.
ನಿಮ್ಮ ಒಂದು ದಿನದ ಸಾವಿರ ರೂಪಾಯಿ ಮೌಲ್ಯವಿರುವ ಒಂದು ಗಂಟೆಯನ್ನಾದರೂ ಹೃದಯಕ್ಕೆ ಹತ್ತಿರವಾದವರಿಗೆ ನೀಡಿ. ಅದು ಮಹತ್ತರವಾದ ಬದಲಾವಣೆಗೊಂದು ನಾಂದಿಯಾಗಬಹುದು.
ಮುಂದೆ ನೀವು ಸತ್ತಾಗ ನೀವು ನಿಮ್ಮ ಸಮಯವನ್ನೆಲ್ಲವನ್ನು, ಪರಿಶ್ರಮವನ್ನು ಕೊಟ್ಟು ಬೆಳೆಸಿದ ಕಂಪೆನಿ ಒಂದೆರಡು ದಿನದಲ್ಲಿ ಮತ್ತೊಬ್ಬರನ್ನು ನಿಮ್ಮ ಬದಲಾಗಿ ನೇಮಿಸಬಹುದು.ಆದರೆ ನಿಮ್ಮ ಕುಟುಂಬಕ್ಕೆ, ನಿಮ್ಮ ಮಿತ್ರರಿಗೆ ನೀವಿಲ್ಲದ ನೋವು ಅವರ ಉಳಿದ ಜೀವನ ಪೂರ್ತಿ ಇರುತ್ತದೆ.ಒಂದು ಕ್ಷಣ ಯೋಚಿಸಿ. ಈ ಅನಿಶ್ಚಿತವಾದ ಪ್ರಪಂಚದಲ್ಲಿ ನಾವ್ಯಾರೂ ಶಾಶ್ವತವಲ್ಲವೆನ್ನುವುದು ಸರ್ವವಿಧಿತ. ಹಣ,ಅಂತಸ್ತನ್ನು ಗಳಿಸುವ ಹೋರಾಟಕ್ಕೆ ತಮ್ಮ ಶಕ್ತಿಯನ್ನೆಲ್ಲಾ ವಿನಿಯೋಗಿಸಿ ಒಂದು ದಿನ ಮೃತ್ಯುವಿನ ಮನೆಯೆಡೆಗೆ ವಿಷಾದಪೂರ್ವಕವಾಗಿ ತೆರಳುವುದರಲ್ಲಿ ಯಾವುದೇ ಅರ್ಥ ಇಲ್ಲ.
ನಮ್ಮ ಬದುಕು ನಮ್ಮದು ಮಾತ್ರವಲ್ಲ. ಅದಕ್ಕೆ ಒಂದಿಷ್ಟು ಪಾಲುದಾರರು ಇದ್ದಾರೆ.
ಅವರಿಗೂ ನಮ್ಮ ಬದುಕನ್ನು ಹಂಚೋಣ..
ಹಂಚಿದಷ್ಟು ಸಂತೋಷ ಹೆಚ್ಚಾಗುವುದು ತಾನೇ..?
ಅಂತಹ ಸಂತಸದ ಬದುಕನ್ನು ನಮ್ಮದಾಗಿಸೋಣ …

05.05.2015
ನಾನು
ನನಗೇನೂ ಆಸೆಯಿಲ್ಲ,
ಯಾಕಂದರೆ ನಿರಾಸೆ
ನನ್ನ ಜೊತೆ ಇದೆ.
ಬದುಕು ನನಗೆ
ಬೇಕಿಲ್ಲ, ಯಾಕಂದರೆ
ನಾನಿನ್ನೂ ಸತ್ತಿಲ್ಲ
ಸುಖ ನನಗೆ ಬೇಕಿಲ್ಲ
ಯಾಕಂದರೆ ದುಃಖ
ಈಗಾಗಲೆ ನನ್ನನ್ನಾವರಿಸಿದೆ.
ನನಗೇನೂ ಚಿಂತೆ ಇಲ್ಲ,
ಯಾಕಂದರೆ ನನ್ನ ಚಿಂತೆ
ಸೊನ್ನೆ ಕಳೆದು ಚಿತೆಯಾಗಿದೆ.
ಬೆಳಕು ನನಗೆ ಬೇಕಿಲ್ಲ
ಯಾಕಂತೀರಾ, ನನ್ನನ್ನು
ಈಗಲೇ ಕತ್ತಲಾವರಿಸಿದೆ
ಕಾಲವೊಂದೆ ಬೇಕಾಗಿದೆ
ನನಗೆ, ಯಾಕಂದರೆ
ನನ್ನ ಕಾಲವಿನ್ನೂ ಕೂಡಿಲ್ಲ.
01.05.2015
ದುಷ್ಟರನ್ನು ಸಜ್ಜನರೆಂದು
ನಂಬಿ, ನಂತರ ಪಶ್ಚಾತ್ತಾಪ
ಪಡುವುದಕ್ಕಿಂತ ದೊಡ್ಡ
ದಡ್ಡತನ ಬೇರೊಂದಿಲ್ಲ.
****ದಾರ್ಶನಿಕ

01.05.2015
ತನ್ನ ನಡವಳಕೆಯೇ ಸರಿ ಇಲ್ಲದವನಿಗೆ
ಇನ್ನೊಬ್ಬನ ನಡವಳಿಕೆಯನ್ನು
ಟೀಕಿಸುವ ಅಧಿಕಾರವಾಗಲೀ,
ಯೊಗ್ಯತೆಯಾಗಲೀ ಇರುವುದಿಲ್ಲ.
.......ದಾರ್ಶನಿಕ

26.04.2015
ಕಳೆದ ಜೀವನದುದ್ದಕ್ಕೂ
ತಾನು ಮಾಡಿದ ತಪ್ಪುಗಳನ್ನು
ಲೆಕ್ಕ ಹಾಕುವುದರಲ್ಲಿ, ಅವನ
ಲೇಖನಿಯ ಮೊನೆಯೇ ಮುರಿಯಿತು
******ದಾರ್ಶನಿಕ

18.04.2015
ಪರಿಚಯಸ್ಥರು, ಹತ್ತಿರದ
ಸಂಬಂಧಿಕರು ಎದುರಿಗೆ
ಸಿಕ್ಕಿದಾಗ, ಮುಖದಲ್ಲಿ
ಒಂದು ಪರಿಚಯದ
ಮುಗುಳು ನಗೆ ಸಹ
ಬೀರದಿದ್ದರೆ, ಆಗುವ
ಮುಜುಗರ, ಬೇಸರ
ವರ್ಣನಾತೀತ.
******ದಾರ್ಶನಿಕ

15.04.2015
ಎಷ್ಟೋ ಭಾಷೆಗಳ ಲಿಪಿ ಗಳನ್ನು ನೋಡಿದ ನನಗೆ
ನಮ್ಮ ಕನ್ನಡ ಭಾಷೆಯ ಲಿಪಿಯೇ ಉಳಿದೆಲ್ಲ ಭಾಷೆಗಳ
ಲಿಪಿಗಳಿಗಿಂತ ಹೆಚ್ಚು ಸುಂದರ ಅನ್ನಿಸುತ್ತದೆ.
ನಾನು ಕನ್ನಡಿಗ, ಕನ್ನಡ ನಮ್ಮ ಭಾಷೆ ಅಂತ
ನನಗೆ ಹಾಗನ್ನಿಸುತ್ತಿದೆಯೇ, ಅಥವಾ ಕನ್ನಡ
ಭಾಷಾ ಲಿಪಿ ಉಳಿದೆಲ್ಲಾ ಲಿಪಿಗಳಿಗಿಂತ
ನಿಜವಾಗಿ ಹೆಚ್ಚು ಸುಂದರವೇ, ಗೊತ್ತಿಲ್ಲ.


09.04.2015
ತಾನೂ ಯಾರಿಗೂ
ಅನಿವಾರ್ಯವಲ್ಲವೆಂದು
ಗೊತ್ತಾದಾಗ, ಮನುಷ್ಯನ
ಅಹಂಕಾರ ತಾನಾಗಿಯೇ
ಕಡಿಮೆಯಾಗುತ್ತದೆ.
*****ದಾರ್ಶನಿಕ

05.04.2015