Friday 24 October 2014

ಮೋಸ ಹೋಗುವವರು ಇರುವವರೆಗೂ
ಮೋಸ ಮಾಡುವವರು ಇರುತ್ತಾರೆ.
-----ಸುಭಾಷಿತ.

24.10.2014
ಅತ್ತೆಗೊಂದು ಕಾಲ - ಸೊಸೆಗೊಂದು ಕಾಲ

ಕಂಪೊಂಡ್ ಗೋಡೆಯ ಆಚೆ ಈಚೆ
ಇಬ್ರು ಅತ್ತೆಯರು ಮಾತನಾಡಿ ಕೊಳ್ಳುತ್ತಿದ್ದರು.
ಸಾರು, ಹುಳಿ, ಪಲ್ಯದ ಬಗ್ಗೆ ವಿಚಾರ ವಿನಿಮಯ
ಆದ ನಂತರ, ಒಬ್ಬಳು ಅತ್ತೆ, "ರಂಗಮ್ಮ, ನನ್ನ ಸೊಸೆ
ಮಹಾ ದುರಹಂಕಾರಿ ಆಗಿದ್ದಾಳೆ, ನೋಡಿ, ನನ್ನನ್ನು
ಏನೂ ಕೇರ್ ಮಾಡುವುದಿಲ್ಲ, ಮಗನಿಗೆ ಮದುವೆ ಮಾಡುವಾಗ ನಾವು ನೋಡಿ ಮಾಡಲಿಲ್ಲ, ತಪ್ಪು ಮಾಡಿದೆವು."
ಆಚೆ ಕಡೆ ಅತ್ತೆ "ನಮ್ಮ ಸೊಸೆ ಕತೇನೂ ಅಷ್ಟೆ. ನಾನು ಏನು ಹೇಳಿದರೂ ಕೇಳೊಲ್ಲ. ನಾವೂ ತಪ್ಪಿದ್ವಿ."
ಇವರಿಬ್ಬರ ಮಾತುಗಳನ್ನು, ಕಿಡಿಕಿಗಳ ಹತ್ತಿರ ರೂಮುಗಳಲ್ಲಿ ಕೂತು ಕೇಳಿಸಿಕೊಳ್ಳುತ್ತಿದ್ದ, ಈ ಅತ್ತೆಯರ ಅತ್ತೆಯಂದಿರು ಏಕ ಕಾಲದಲ್ಲಿ ಗೊಣಗಿಕೊಂಡರು. "ನಾವೂ ಅಷ್ಟೆ. ಸರಿಯಗಿ ವಿಚಾರ ಮಾಡಿ ಸೊಸೆಯನ್ನು ತಂದಿದ್ದಿದ್ದರೆ, ಈಗ ನಮಗೆ ಈ ಗತಿ ಬರುತ್ತಿರಲಿಲ್ಲ"
ಅತ್ತೆಗೊಂದು ಕಾಲ, ಸೊಸೆಗೊಂದು ಕಾಲ. 'ಕಾಲಾಯ ತಸ್ಮೈ ನಮಹ'
***********
22.10.2014
ನುಡಿ ಮುತ್ತು.

"ಯೌವನದ ಮತ್ತಿನಲ್ಲಿ,
ದೈಹಿಕ ಆಕರ್ಷಣೆಗೆ
ಶರಣಾಗಿ ತನ್ನತನವನ್ನು ಕಳೆದು ಕೊಳ್ಳುವುದಕ್ಕಿಂತ ದೊಡ್ಡ 
ಮೂರ್ಖತನ ಇನ್ನೊಂದಿಲ್ಲ"
***George Walis

22.10.2014
ಮಮತೆ - ಶಾಂತಿ.

ಅವನು ಬಾಬಾನ ಹತ್ತಿರ
ಸಲಹೆ ಕೇಳಲು ಹೋದ,
"ಮನೆಯಲ್ಲೂ ಶಾಂತಿ ಇಲ್ಲ,
ಶಾಂತಿ ಹುಡುಕಿಕೊಂಡು
ಹೊರಬಂದರೆ, ಹೊರಗೂ
ಶಾಂತಿ ಎಲ್ಲೂ ಕಾಣ್ತಾನೇ ಇಲ್ಲ.
ಎಲ್ಲದರಲ್ಲೂ ನಿರುತ್ಸಾಹ,
ಸಂಶಯ, ಕಾಣದ ಭಯ,
ರಾತ್ರಿ ನಿದ್ರೆ ಬರೊಲ್ಲ,
ಊಟ ರುಚಿಸೊಲ್ಲ, ಉಂಡರೂ
ಜೀರ್ಣನೇ ಆಗೋದಿಲ್ಲ,
ಯಾರೂ ಬೇಡ, ಯಾವುದೂ ಬೇಡ
ಎಂದು ಸದಾ ಕಾಡುವ ಆತಂಕ,
ಬಾಬಾ, ಏನಾದರೂ ಮಾಡು,
ನನ್ನ ಕಷ್ಟ ಹೋಗಲಾಡಿಸು,
ನನ್ನನ್ನು ಜೀವನ್ಮುಖಿ ಮಾಡು"
ಎಂದು ಅಂಗಲಾಚಿ ಬೇಡಿಕೊಂಡ.
ಬಾಬಾ ಕಣ್ಮುಚ್ಚಿ ಮೇಲೆ ನೋಡಿದರು,
ಒಂದು ಕಿವಿಗೆ ಕೈಹಿಡಿದು ಮೇಲಿಂದ
ಏನೋ ಅವರಿಗಷ್ಟೇ ಕೇಳುವ
ಅಶರೀರವಾಣಿ ಅಲಿಸಿದಂತೆ
ಮುಖ ಮಾಡಿ ಹೇಳಿದರು,
"ಭಕ್ತಾ, ಹಿಮಾಲಯಕ್ಕೆ ಹೋಗಿ
ಒಂದು ತಿಂಗಳು ಒಂಟಿಕಾಲಲ್ಲಿ ನಿಂತು
ತಪಸ್ಸು ಮಾಡಿ ಬಾ, ಎಲ್ಲಾ ಸರಿ ಹೋಗುತ್ತೆ"
ಹೊರಟೇ ಬಿಟ್ಟ, ಕಾಷಾಯ ವಸ್ತ್ರಧರಿಸಿ,
ಹೆಗಲಿಗೊಂದು ಜೋಳಿಗೆ ಚೀಲ ಇಳಿಬಿಟ್ಟು,
ಹಿಮಾಲಯದ ತಪ್ಪಲಲ್ಲಿ ನಿಂತು ಮೇಲೆ
ದಿಟ್ಟಿಸಿದ, ದೃಷ್ಟಿಗಟುಕದ ಹಿಮಾಲಯ ಶಿಖರ.
ಮತ್ತೆ ಕಾಡಿತು ಸಂಶಯ, ಬಾಬಾ ಹೇಳಿದ
ಈ ಗಿರಿ ಶಿಖರ ಏರಲು ಸಾಧ್ಯವೇ, ಇಲ್ಲವೇ ಇಲ್ಲ,
ಭ್ರಮ ನಿರಸನವಾಯ್ತು, ಹಿಂತಿರುಗಿದ.
ಮನೆಯಲ್ಲಿ ಕಾದಿದ್ದಳು ಮಡದಿ ಗಾಬರಿಯಾಗಿ,
ಬಾಬಾ ಹಿಮಾಲಯಕ್ಕೆ ತಪಕ್ಕೆ ಕಳಿಸಿದರೆಂದ,
"ನಾನಿರಲು ನಿಮಗೇಕೆ, ಹಿಮಾಲಯದ ಭ್ರಮೆ,
ಎಂದು ತಲೆ ಎದೆಗಾನಿಸಿ, ನೇವರಿಸಿದಳು.
ಭ್ರಮೆಯ ಬಿಡಿ, ನಾನೇ ನಿಮ್ಮ ಹಿಮಾಲಯ,
ಸುಖಿಸಿ ಬಾಳುವ ತೃಪ್ತಿಯ ಬದುಕೇ ಶಾಂತಿ,"
ಹೌದೆನಿಸಿತವನಿಗೆ, ಮನೆಯಲ್ಲಿ ಶಾಂತಿ
ಮಡದಿಯ ಮಮತೆ ಇಲ್ಲಿರುವಾಗ ಮತ್ತೆಲ್ಲಿ
ಏನ ಹುಡುಕಲಿ ಎಂದು ಎಂದು
ಮಡಿದಿಯ ಕಣ್ಣುಗಳನ್ನು ದಿಟ್ಟಿಸಿ ನಸು ನಕ್ಕ.
************
20.10.2014
ಇಂದಿನ " ಸುಜ್ಞಾನ"

"ಮಡದಿ, ಭೋಜನ, ಹಣ, ಈ
ಮೂರರಲ್ಲಿ ತೃಪ್ತಿ ಇರಬೇಕು.
ಅಧ್ಯಯನ, ಜಪ, ದಾನ ಈ
ಮೂರರಲ್ಲಿಯೂ ತೃಪ್ತಿ ಇರಬಾರದು."
-----ಪದ್ಮಮಾಲಿಕಾ.
(ಭೋಜನದಲ್ಲಿ ವಿವಿಧತೆಗಳ ಬಯಕೆ ನಿರಂತರವಾಗಿರುತ್ತೆ. ಹೊಟ್ಟೆಯಲ್ಲಿ ಹಿಡಿಯುವುದಿಲ್ಲವಾದರೆ ಮಾತ್ರ ಸಾಕು ಅನ್ನುತ್ತೇವಷ್ಟೆ. ಹಣವಂತೂ ಎಷ್ಟಿದ್ದರೂ ಮನುಷ್ಯನಿಗೆ ತೃಪ್ತಿ ಇರೊಲ್ಲ. ಆದರೆ, ಮಡದಿಯ ಬಗ್ಗೆ ಈ ತರಹದ ಯಾವ ಭಾವನೆಯೂ ಇರಬಾರದು.....ಅಲ್ಲವೇ?  ಮಡದಿಯ ಬಗ್ಗೆ ಅಂತೂ ತೃಪ್ತಿ ಇರಲೇ ಬೇಕು..... )

19.10,2014
Today is my younger grandson, Krutharth's Birthday.

19.10.2014

Sunday 19 October 2014

ವೈರಿಗಳು 

"ದಿನವಿಡೀ ಯುದ್ದ ಮಾಡುವ ವೈರಿಗಳು,
ರಾತ್ರಿ ಮಾತ್ರ ಒಂದೇ ಹಾಸಿಗೆಯನ್ನು ಹಂಚಿ
ಕೊಳ್ಳುತ್ತಾರೆ.... "
****ದಾರ್ಶನಿಕ

19.10.2014
ಕೆಂಗುಲಾಬಿ
ಮುಂಜಾವಿನ ರಂಗೋಲಿ. !
ಹಸಿರಾದ ಗಿಡದೊಳಗೆ
ಶುಭ್ರ ಪರಿಸರದೊಳಗೆ
ಸವಿ ನಾದ, ನಿನ್ನ ಉಲಿ!
ತಂಪಾದ ಸುಳಿಗಾಳಿ
ರೋಮಾಂಚನವ ನೀಡಿ
ಸೊಂಪಾದ ನಿನ ಮೈಗೆ
ಕೆಂಪೆರೆದಿದೆ. !
ಘನತೆ ಇಹ ನಿನ ಕಾಯ
ಪೂರ್ಣತೆಯ ಬಿಂಬಿಸಿದೆ
ಆಗಸದ ಹನಿಮುತ್ತು
ಗಲ್ಲವನು ಚುಂಬಿಸಿದೆ. !
ಹೊಂಬಿಸಿಲ ಹೊಂಗಿರಣ
ಮುಖಕೆ ಕನ್ನಡಿಯಾಗಿ
ಭೂತಾಯಿಯಾಸೆಯಾ
ಉಡಿಯ ತುಂಬಿಸಿದೆ. !
ಮೃದುವಾದ ಪಕಳೆಗಳು
ನಿನ್ನೊಡಲ ಮುಚ್ಚಿಹವು
ಕುಸುಮದೀ ಸೌಮ್ಯತೆಗೆ
ನಯ ರಕ್ಷೆಯಾಗಿ. !
ಪರಿಮಳವು ಪುಲಕಿಸಿದೆ
ಮಾದಕತೆ ಉಕ್ಕುತ್ತಿದೆ
ರಸಿಕಕವಿಯಾ ಕನಸ
ನಿಜಮೂರ್ತಿಯಾಗಿ.
(ಇದು ನಾನು ಬರೆದ ಕವಿತೆ ಅಲ್ಲ. ಯಾರೋ ಅನಾಮಧೇಯ ಕವಿ ಬರೆದ ಕವಿತೆ. ಹೇಗಿದೆ ಎಂದು ನೀವೇ ಹೇಳ ಬೇಕು)
(ಈ  ಕವನ ಇಂಗ್ಲಿಷ್ ಮೀಡಿಯಂ  CBSE   3 ನೇ ತರಗತಿಯ ಕನ್ನಡ  ಟೆಕ್ಸ್ಟ್ ಬುಕ್  ನಲ್ಲಿ ಇದೆ )  

Saturday 18 October 2014

ಒಂಟಿತನ 

"ಒಂಟಿತನ ಹೇಗಾದರೂ ಒಂಟಿತನವೇ,
ಆದರೆ, ಅತೀ ಕೆಟ್ಟ ಹಾಗೂ ಅಸಹನೀಯ
ಒಂಟಿತನವೆಂದರೆ ಅದು 'ವಿರಸ ದಾಂಪತ್ಯ' "
......ಸಿಗ್ಮಂಡ್ ಫ್ರಾಯ್ಡ್.

17.10.2014

Friday 17 October 2014

ಒಂದಾಗಿ ಸಾಗೋಣ
ಭಾರೀ ಮಳೆಯೇ ಬರಲಿ,
ಬಿರುಸು ಬಿರುಗಾಳಿಯೇ ಬೀಸಲಿ,
ಗೆಳತಿ ನೀ ಹೆದರಬೇಡ,
ನಾನಿರುವೆನು ನಿನ್ನ ಜೋಡಿ,
ನಿನ್ನ ಹನಿ ಮಳೆಯಲ್ಲೂ
ತೋಯಲು ಬಿಡಲಾರೆ,
ಬಿಸಿಲಲೂ ನೆರಳಾಗಿರುವೆ,
ನಾನೇ ನಿನಗೆ ಎಲ್ಲವಾಗಿರುವೆ
ಬೆಲ್ಲದಂತ ಜೀವನ ಕೊಡುವೆ,
ನನ್ನೀ ತೆರೆದಿಟ್ಟ ಮನದಲ್ಲಿ
ನಿನ್ನ ಕುಳ್ಳಿರಿಸಿ ಓಲೈಸುವೆ,
ನನ್ನೆದೆ ಮಂದಿರವಾದರೆ
ನೀನಲ್ಲಿ ಸಿರಿ ದೇವಿಯಾಗಿರುವೆ,
ಭುಜಕ್ಕೆ ಭುಜವಾನಿಸಿ
ಕೈ ಬಳಸಿ ಮುನ್ನಡೆಸುವೆ,
ನಿನ್ನ ಮುಂಗುರುಳ ಸುಗಂಧದಲಿ
ಮೈ ಮರೆತು ಮುನ್ನಡೆವೆ,
ನಿನ್ನ ಕನಸುಗಳ ನನಸಾಗುವೆ
ನಿನ್ನ ಕಣ್ಣಾಲಿಗಳಲಿ
ಎಂದಿಗೂ ನಾನಿರುವೆ,
ನಿನ್ನ ಕಣ್ಣುಗಳೆಂದೂ
ಹನಿಯದಂತಿರುವೆ,
ನಿನ್ನ ಅರೆ ಬಿರಿದ ತಟಿಗಳ
ಕಿರು ನಗು ಸದಾ ನಾನಾಗುವೆ,
ನಂಬು ನನ್ನ, ನಾನೆಂದೂ
ಕೈ ಬಿಡೆನು ನಿನ್ನ,
ಸಾಗುವ ಮುಂದೆ
ಎರಡು ಜೀವ ಒಂದಾಗಿ ಎಂದೆಂದೂ.
********
16.10.2014
LikeLike ·  · 

Tuesday 14 October 2014

ನನ್ನ ಮಗು.

ಓ......ನನ್ನ
ಮಗುವೇ,
ಓ ನನ್ನ ಕಂದ
ನಿನ್ನಂದವ
ಎನಿತು ಬಣ್ಣಿಸಲಿ,
ಮಗುವೇ, ನಿನ್ನ
ನಸು ನಗುವ
ಅರೆ ಬಿರಿದ
ತುಟಿಗಳು,
ನಡುವೆ ಇಣುಕುವ
ಮೋಡಿ ಮುತ್ತುಗಳು,
ಜಗದೆಡೆಗೆ
ಕುತೂಹಲದ ನೋಟ
ಬೀರುತಿಹ
ಆ ದುಂಬಿ ಕಂಗಳು,
ನಡುವೆ ನೀಳ
ಸಂಪಿಗೆ ನಾಸಿಕ,
ತಿಲಕವಿಟ್ಟ ಹಣೆಗೆ
ಮುದ್ದಿಸುತಿಹ
ಮುಂಗುರುಳು,
ಮುತ್ತ ಕೊಡೇ ಬಾ
ಎಂದು ಕರೆವ
ತುಂಬು ಗಲ್ಲಗಳು,
ನಾನಿಟ್ಟ ದೃಷ್ಟಿ ಚಿಕ್ಕಿ
ಹೊತ್ತು, ಹಿಡಿ ಬಾ
ಎಂದು ಉಲಿಯುವ
ಮುದ್ದಾದ ಗದ್ದ.
ಮಗುವೇ, ಈ ನಿನ್ನಂದ
ನನ್ನ ಕಣ್ತುಂಬಿದೆ,
ನನ್ನೆದೆಯಲಿ
ನಿನ್ನ ಪುಟ್ಟ ಮೃದು
ಪಾದಗಳು ನಲಿದಿವೆ.
ಧನ್ಯಳಾದೆ ನಾ
ನಿನ್ನ ಈ ಜಗಕೆ ತಂದು,
ಆ ದೇವ ಕರುಣಿಸಲಿ
ನಿನಗೆಲ್ಲ ಸುಖವನು
ಮುಂದೆ ಎಂದೆಂದೂ.
********
೧೩.೧೦.೨೦೧೪.
ತ್ಯಾಗ.
ಇದ್ದಕ್ಕಿದ್ದಂತೆ ಒಂದು ಯೋಚನೆ ಬಂತು,
ನಿಜವಾದ ತ್ಯಾಗ ಜೀವಿಗಳು ಯಾರು ಅಂತ.
ಜೀವ ಇರುವ ತ್ಯಾಗಿಗಳಾರೂ ನೆನಪಿಗೆ ಬರಲಿಲ್ಲ. ಬೇರೆಯವರಿಗೋಸ್ಕರ ತಮ್ಮ ಜೀವನ ಸವೆಸಿ ಕೊನೆಗೆ ತಾವೇ ನಶಿಸಿ ಹೋಗುವ ಎರಡು ನಿರ್ಜೀವ ವಸ್ತುಗಳು ನೆನಪಿಗೆ ಬಂದವು.
ಒಂದು : ದೀಪದ ಬತ್ತಿ. ಎಂಣೆಯ ಸಹಕಾರದಿಂದ, ತಾನು ಹೊತ್ತಿ ಉರಿದು, ದೇವರಿಗೆ ಸಹ ಬೆಳಕು ಬೀರಿ, ಕಿರಿದು ಕಿರಿದು ಆಗುತ್ತಾ ಹೋಗಿ, ಕೊನೆಗೆ ಅತಿ ಕಿರಿದಾದಾಗ, ಇನ್ನು ಉರಿಯಲಾರದೆ ಕಸಕ್ಕೆ ಸೇರುತ್ತದೆ.
ಎರಡು: ಕಸಬರಿಕೆ. ಪ್ರತೀ ದಿನ ತಾನಿರುವ ಮನೆಯನ್ನು ಗುಡಿಸಿ, ಗುಡಿಸಿ, ಸ್ವಚ್ಛ ಮಾಡುತ್ತಾ ಮಾಡುತ್ತಾ, ತಾನೇ ಸವೆದು ಸವೆದು ಅತಿ ಕಿರಿದಾಗಿ ಕೊನೆಗೊಂದು ದಿನ ತಾನೇ ಕಸದ ಬುಟ್ಟಿ ಸೇರುತ್ತದೆ.
ಇಂಥಹ ತ್ಯಾಗವೇ ನಿಜವಾದ ತ್ಯಾಗ ಅನ್ನಿಸೊಲ್ಲವೇ?.
***********
ಕವಿತೆ - ಕವನ - ಕವಿ
ಕವಿತೆಗಳೇನು ಕವಿಗಳಿಗೆ,
ತಲೆಯಲ್ಲಿ ಹರಿದಾಡುವ
ಭಾವ ಭಾವನೆಗಳ ಸಾಲೇ,
ಕನಸಿನ ಲೋಕದಲ್ಲಿ ಮೂಡಿ
ಮರೆಯಾಗುವ ಹೊಂಗನಸೇ,
ಬಿಳಿ ಹಾಳೆಗಳ ಮೇಲೆ
ಹಾಡು ಹಾಡುತ್ತ ಸಾಗುವ
ಕೋಗಿಲೆಗಳ ಸಾಲು ಸಾಲೇ,
ಇಲ್ಲಾ, ಅಂತರಂಗದಲ್ಲಿ ತುಂಬಿ
ಉಕ್ಕಿ ಹರಿಯುವ ಕೆಂಪು ನೀರೇ,
ಅಥವಾ, ಪ್ರೇಮಿಗಳ ಮಿಲನ
ವಿರಹಗಳ ಸಿಹಿ ಕಹಿ ವರ್ಣನೆಯೇ,
ಎಂದೂ ಕವಿಯ ಅಂತರಂಗದ
ಬಹಿರಂಗವೇ ಕವಿತೆ, ಒದುಗನ
ಹೃದಯದ ಕದ ತಟ್ಟಿದರೆ
ಅದೇ ಗುಣು ಗುಣಿಸುವ ಕವನ.
*********
ಫೇಸ್ ಬುಕ್ ಪೋಸ್ಟಿಂಗ್ 


ಯಾರೋ ಇತ್ತೀಚೆಗೆನನ್ನ ಮಹಿಳಾ ಮಿತ್ರರೊಬ್ಬರು (ಯಾರಂತ ನೆನಪಾಗ್ತಾ ಇಲ್ಲ) "ಬೆಳಿಗ್ಗೆಯಿಂದ ಬಹಳ ತಲೆ ನೋವು.......ಏನಾದರೂ remedy ಸೂಚಿಸಿ " ಪೋಸ್ಟ್ ಹಾಕಿದ್ದರು. ಅದಕ್ಕೆ ನೂರಕ್ಕಿಂತ ಹೆಚ್ಚು ಲೈಕುಗಳು,
50 ಕ್ಕಿಂತ ಹೆಚ್ಚು ಕಮೆಂಟುಗಳು ಬಂದಿದ್ದವು
ಅದಕ್ಕೆ ನನಗೂ ಸಿಕ್ಕಿದ ಒಂದು ಹಳೇ ಕಾಮೆಂಟು...... 

Sunday 5 October 2014


ಒಂದು ಅಕ್ಷರ ಪ್ರಮಾದ 

ಇತ್ತೀಚೆಗೆ ನಮ್ಮ ಸ್ನೇಹಿತರೊಬ್ಬರು ಉತ್ತರ ಕರ್ನಾಟಕದ 'surname" ಇದ್ದ ಒಂದು sign board ನ್ನು
ಜೋಕ್ ಅಂತ ಸ್ಟೇಟಸ್ ಹಾಕಿ, ಅದರ ಬಗ್ಗೆ ತಕ್ಕಷ್ಟು ಪರ ವಿರೋಧದ ಕಮೆಂಟುಗಳು ಆದವು.
ಈಗ ನಾನೊಂದು ಹೆಸರಿನ ಪ್ರಮಾದದ ಒಂದು ನೈಜ ಘಟನೆಯ ಜೋಕ್ ಹೇಳುತ್ತೇನೆ, ಕೇಳಿ.
ಆಗ ನಾನು ಭದ್ರಾವತಿಯಲ್ಲಿ ಸಿಂಡಿಕೇಟ್ ಬ್ಯಾಂಕಿಗೆ 1964ರಲ್ಲಿ ಸೇರಿದ ಹೊಸದು. ಅಲ್ಲಿ ಒಬ್ಬರು
ನಮ್ಮ ಮ್ಯಾನೇಜರ್ ಇದ್ದರು. ಆಗ ಎಲ್ಲ ಕೈ ಬರಹದ ಕಾಲ. ಬರೇ ಮ್ಯಾನೇಜರ್ ಕಳಿಸುತಿದ್ದ letters.
ಮಾತ್ರ typewriter ನಲ್ಲಿ type ಆಗಿ ಹೋಗುತಿದ್ದವು. ನಮ್ಮ ಮ್ಯಾನೇಜರ್, ಯಾವಾಗಲೂ, ಪದೇ ಪದೇ, ನಮಗೆ "ನೋಡಿ, ಏನೇ ಬರೆಯುವಾಗಲೂ ಅಕ್ಷರ ಶುದ್ಧವಾಗಿರುವಂತೆ ನೋಡಿ ಕೊಳ್ಳಿ, ಅದು ತುಂಬಾ ಮುಖ್ಯ" ಎಂದು ಹೇಳುತ್ತಾ ಇರುತ್ತಿದ್ದರು.
ನಾವೆಲ್ಲ ಸೇರಿ ಒಮ್ಮೆ ಅವರಿಗೆ ಕೇಳಿದೆವು , "ಸರ್, ಒಳ್ಳೇ ಸ್ಕೂಲ್ ಮೇಸ್ಟ್ರ ಹಾಗೆ, ಯಾವಾಗಲೂ ಅಕ್ಷರ ಸರಿ ಇರಲಿ ಅಂತಾನೆ ಇರ್ತೀರಲ್ಲ, ಯಾಕೆ?" ಎಂದು ಕೇಳಿದೆವು. ಆಗ ಅವರು, "ನನ್ನ ಈ ಅನುಭವ ಕೇಳಿ, ಆ ಮೇಲೆ ನೀವೇ ನಾನು ಹೇಳಿದ್ದು ಸರಿ ಅಂತೀರಿ" ಎಂದು ತಮ್ಮ ಅನುಭವ ಹೇಳಿದರು. ಅವರ ಮಾತಲ್ಲೇ ಕೇಳಿ. 
"ನಾನು ಉಡುಪಿಯಲ್ಲಿ ಬ್ಯಾಂಕಿಗೆ ಸೇರಿದ ಹೊಸದು. ಎಲ್ಲ ಹೊಸಬರಿಗೂ ಕೊಡುವ ಹಾಗೆ ನನಗೆ ಸಹ despatch ಸೆಕ್ಶನ್ ಕೆಲಸ ಕೊಟ್ಟಿದ್ದರು. ಕವರುಗಳ ಮೇಲೆ ಹೆಸರು ಅಡ್ರೆಸ್ ಬರೆದು ಕಳಿಸುವ ಕೆಲಸ.
"Roque Fernades" ಎನ್ನುವ ಒಬ್ಬ ಗ್ರಾಹಕರಿಗೆ ಒಂದು ಪತ್ರವಿತ್ತು. ನಾನು ಅವಸರದಲ್ಲಿಯೋ, ಹೇಗೋ ಕವರಿನ ಮೇಲೆ ಅವರ ಹೆಸರನ್ನು "Rogue Fernandes" ಬರೆದು ಕಳಿಸಿದೆ. ವಿಳಾಸ ಸರಿ ಇದ್ದುದರಿಂದ,
ಕಾಗದ ಅವನಿಗೆ ಮುಟ್ಟಿಯೂ ಮುಟ್ಟಿತು. Postman, ರೋಗ್ ಫೆರ್ನಾಂದೆಸ್, ಎಂದು ಉಚ್ಚರಿಸಿ ನಕ್ಕು ಕೊಟ್ಟು ಹೋದನಂತೆ.
ಅವರಿಗೆ ಸಿಟ್ಟು ನೆತ್ತಿಗೇರಿತು. ಆ ಲೆಟರ್ ಹಿಡಿದುಕೊಂಡು ಬ್ಯಾಂಕಿಗೆ ಬಂದು ಗಲಾಟೆ ಶುರು ಮಾಡಿದರು. ' ಏನು, ನಿಮ್ಮ staff ಗೆ ನೆಟ್ಟಗೆ ಒಂದು ಹೆಸರು ಬರೆಯಲೂ ಬರುವುದಿಲ್ಲವೇ? ಅಥವಾ ನಾನು ನಿಮ್ಮ ಕಣ್ಣಿಗೆ ಕಳ್ಳನ ಹಾಗೆ ಕಾಣಿಸುತ್ತೇನಾ? ಅದಕ್ಕೇ "Roque Fernandes" ಬದಲಿಗೆ "Rogue Fernandes" ಅಂತ ಬರೆದಿದ್ದೀರಾ?
ಯಾರವನು ಬರೆದವನು, ಅವನನನ್ನು ಈಗಿಂದೀಗಲೇ ಕೆಲಸದಿಂದ ತೆಗೆಯಬೇಕು, ಇಲ್ಲದಿದ್ದರೆ ನಾನೇ Chairman ಹತ್ತಿರಹೋಗಿ complaint ಮಾಡಿ ಅವನನ್ನು ಕೆಲಸದಿಂದ ತೆಗೆಸಿಯೇ ಬಿಡುತ್ತೇನೆ' ಎಂದು ಕೂಗಾಡಿದರು.
ಮ್ಯಾನೇಜರ್, ಅವರನ್ನು ಕರೆದು ತಮ್ಮ ಕೋಣೆಯಲ್ಲಿ ಕುಳ್ಳಿರಿಸಿ ಸಮಾಧಾನ ಮಾಡಿ, ಆ ಲೆಟರ್ ತೆಗೆದು ಕೊಂಡು ನೋಡಿದರೆ, ಅದರಲ್ಲಿ ಕ್ಲಿಯರ್ ಆಗಿ 'Rogue Fernandes" ಎಂದು ಬರೆದಿತ್ತು. ಆಗ ಮ್ಯಾನೇಜರ್ ನನ್ನನ್ನು ಕರೆದು ಅವರೆದುರಿಗೇ ಸಿಕ್ಕ ಪಟ್ಟೆ ಬೈದರು. ಈಗ ಇವರು Chairman ಹತ್ತಿರ ಹೋದರೆ ನಿನ್ನ ಕೆಲಸವೇ ಹೋಗುತ್ತದೆ, (ಆಗ Chairman ಅಲ್ಲೇ, ಉಡುಪಿಯಲ್ಲೇ ಇದ್ದರು, ಅಲ್ಲದೆ private management ಆದ್ದರಿಂದ ಅವರು ಮನಸ್ಸು ಮಾಡಿದರೆ ನನ್ನ ಕೆಲಸವೂ ಸುಲಭವಾಗಿ ಹೋಗ ಬಹುದಿತ್ತು.) ಕೂಡಲೇ ತಪ್ಪಾಯಿತೆಂದು ಅವರ ಕಾಲಿಗೆ ಬಿದ್ದು ಕ್ಷಮೆ ಕೇಳು, ಇನ್ನೂ ಮೇಲೆ ಜಾಗ್ರತೆಯಾಗಿರುತ್ತೇನೆ ಎಂದು ಹೇಳು. ಬಹಳ ಕಷ್ಟ ಪಟ್ಟು ಗಿಟ್ಟಿಸಿದ ಕೆಲಸ ಕಳೆದುಕೊಳ್ಳಲಾರದೆ, ನಾನು ಮ್ಯಾನೇಜರ್ ಹೇಳಿದ ಹಾಗೆ ಮಾಡಿದೆ. ಆ ಗ್ರಾಹಕರಿಗೆ, ಕಾಫಿ ತಿಂಡಿ ತರಿಸಿ ಕೊಟ್ಟು, ಅಂತೂ ಇಂತೂ ಸಮಾಧಾನ ಮಾಡಿ ಕಳಿಸಿದ್ದಾಯಿತು.
ಇಂಗ್ಲೀಷ್ handwriting ನಲ್ಲಿ "q" ಗೂ "g'" ಗೂ ಇರುವುದು ಸ್ವಲ್ಪವೇ ವ್ಯತ್ಯಾಸವಲ್ಲವೆ? ನನ್ನ ಗಡಿಬಿಡಿಯಲ್ಲಿ ಅಕ್ಷರದ ಬಾಲ ಆಚೆಕಡೆ ಹೋಗುವ ಬದಲು ಈಚೆಕಡೆ ಬಂದು ಬಿಟ್ಟಿತ್ತು. ಅದಕ್ಕೆ ಈ ತರ ಪ್ರಮಾದ ಆಗಿತ್ತು.
ಆದ್ದರಿಂದಲೇ, ನಾನು ಯಾವಾಗಲೂ ನಿಮಗೆ ಹೇಳುವುದು, ಅಕ್ಷರಗಳನ್ನು ಸರಿಯಾಗಿ ನೋಡಿ, ಸ್ಪಷ್ಟವಾಗಿ ಬರೆಯಿರಿ ಎಂದು."
ನಾವೆಲ್ಲ ಒಬ್ಬರ ಮುಖ ಒಬ್ಬರು ನೋಡಿ ಕೊಂಡು ಜೋರಾಗಿ ನಕ್ಕು " ಸರಿ ಸಾರ್, ಜಾಗ್ರತೆ ಯಾಗಿರುತ್ತೇವೆ ಅಂದು ತಮ್ಮ ತಮ್ಮ ಟೇಬಲ್ ಗಳಿಗೆ ಮರಳಿ, "Roque" --- "Rogue" ಅಂದು ಕೊಂಡು ಮತ್ತೆ ಮತ್ತೆ ನಕ್ಕೆವು.
ಹೀಗಿದೆ ನೋಡಿ, ಒಂದು ಅಕ್ಷ್ರರ ಬದಲಾದರೆ ಆಗುವ ಪ್ರಮಾದ.
***********
A Nice Photo


See the expressions on their faces......    

ವಿಶಾಲ ಕರ್ನಾಟಕ 

ಸ್ನೇಹಿತರ ಸ್ಟೇಟಸ್ ಒಂದಕ್ಕೆ ನನ್ನ ಪ್ರತಿಕ್ರಯೆ.
ನಿಮಗೇನನ್ನಿಸುತ್ತೋ ನೋಡಿ.....
***********
"ನಮ್ಮದು ಕರ್ನಾಟಕ ವಿಶಾಲ ಕರ್ನಾಟಕವಾದರೂ, ಪ್ರತಿ 8 kms ಗೆ ಭಾಷೆಯ dialect ಬದಲಾಗುತ್ತೆ. ಈ board ನ್ನು joke ಎಂದು ತಿಳಿದು ಕೊಳ್ಳದೆ, ಅಲ್ಲೇ ವಿಚಾರಿಸಿದ್ದರೆ, ಅದೊಂದು surname ಎಂದು ಗೊತ್ತಾಗಿ ಹೋಗುತ್ತಿತ್ತು. ಅಂಥ surnames ಉತ್ತರ ಕರ್ನಾಟಕದಲ್ಲಿ ಬಹಳ ಅಂದ್ರೆ ಬಹಳ common. ಉಳ್ಳಾಗಡ್ಡಿ, ಮೆಣಸಿನಕಾಯಿ, ಇತ್ಯಾದಿ surnames ಇದ್ದಾವೆ. ನಮ್ಮ ಹೆಸರು surnames ಬಗ್ಗೆ ನಮಗಿರುವಂತೆ ಅವರಿಗೂ ಅಭಿಮಾನ ವಿರುತ್ತದೆ. ಯಾರೋ ಕಾಮೆಂಟ್ ಮಾಡಿದಂತೆ, ನಿಮಗೆ "ಮೆಣಸಿನ ಕಾಯಿ ದವಾಖಾನೆ" board ಸಹ ನಿಮಗೆ ಖಂಡಿತಾ ಹುಡುಕಿದರೆ ಸಿಗುತ್ತೆ. ಹಾಗೇ, ಈ ಕಡೆ, "ಕಮಲ ಬೇಕರಿ" "ಕಾವೇರಿ ಬೇಕರಿ" ಅಂತೆಲ್ಲ ಬೋರ್ಡ್ ಕನ್ನಡದಲ್ಲಿ ಹಾಕಿ ಕೊಳ್ಳುತ್ತಾರೆ. ಅಂದರೆ, ನಮಗೆ ಕಮಲ ಬೇಕು ಅಂತಾನಾ ಅಥವಾ ಇಲ್ಲಿ bread ಸಿಗತ್ತೆ ಅಂತಾನಾ?
ಇವೆಲ್ಲ, commedy stage show ಗಳಲ್ಲಿ ಚೆನ್ನಾಗಿರುತ್ತದೆ. ಸಾಮಾಜಿಕ ತಾಣಗಳ ಜೋಕಾಗಿ ಅಲ್ಲ.
ಆದ್ದರಿಂದ ಈ ಭಾಷೆ, ಇತ್ಯಾದಿಗಳ ಬಗ್ಗೆ ತಮಾಶೆಗೆ ಇಳಿಯುವ ಮೊದಲು, ಯೋಚಿಸ ಬೇಕು. ಹೀಗೆಲ್ಲ ವಿಚಾರ ಹೆಚ್ಚು ಮಾಡಿದರೆ, ಈಗ ಅಖಂಡ ಆಂಧ್ರ ಹೋಗಿ, ತೆಲಂಗಾಣ - ಸೀಮಾಂಧ್ರ ಆದಂತೆ, ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ ಆಗುವ ದಿನ ದೂರ ವಿರುವುದಿಲ್ಲ. ಆದ್ದರಿಂದೆ ಅಖಂಡತೆಯನ್ನು ಉಳಿಸುಕೊಳ್ಳುವ ಬಗ್ಗೆ ಚಿಂತಿಸಬೇಕೇ ವಿನಃ ಇಂಥಹ ವಿಷಯಗಳ ಬಗ್ಗೆ ಅಲ್ಲ. ಈಗಾಗಲೇ, ಉತ್ತರ ಕರ್ನಾಟಕದ ಜನರಲ್ಲಿ ತಮ್ಮನ್ನು ಹಳೆ ಮೈಸೂರಿಗರು ಕಡೆಗಣಿಸುತ್ತಿದ್ದಾರೆ ಎಂಬ ಭಾವನೆ ಬರ್ತಾ ಇದೆ. ಅದನ್ನು ಅವಕಾಶವಾದಿ ರಾಜಕಾರಿಣಿಗಳು ದುರುಪಯೋಗ ಪಡಿಸಿಕೊಳ್ಲುತ್ತಾರೆ. ಈಗಾಗಲೇ "ಕತ್ತಿ" ಪುರಾಣ ಶುರು ಆಗಿದೆ. ಹೀಗಾಗಲು ಬಿಡಬಾರದು.
ಯಾವುದೋ ಚಿಕ್ಕ joke ಬಗ್ಗೆ ಇಷ್ಟುದ್ದ ಭಾಷಣ ಮಾಡಿದ, ಅಂದು ಕೊಳ್ಳ ಬೇಡಿ
ನಾನು ನೇರವಾಗಿ ಮನಸ್ಸಿಗೆ ತೋಚಿದ್ದನ್ನು ಹೇಳಿದ್ದು ಮನಸ್ಸಿಗೆ ನೋವು ತಂದಿದ್ದರೆ ಕ್ಷಮೆ ಇರಲಿ"  04.10.2014

ಮಹಾತ್ಮಾ ಗಾಂಧೀಜಿಯವರ ಒಂದು ಅಪರೂಪದ ಫೋಟೋ 

ಅಪರೂಪದ ಫೋಟೋ. 1927 ರ ಫೆಬ್ರುವರೀ 27 ರಂದು ಮಹಾತ್ಮ ಗಾಂಧೀಜಿ ಕೋಮು ಗಲಭೆಗೆ ಈಡಾಗಿದ್ದ ಗುಲ್ಬರ್ಗಕ್ಕೆ ಶಾಂತಿ ಮಂತ್ರ ವಾಚನ ಸಲುವಾಗಿ ಬಂದಿದ್ದರು. ಅಲ್ಲಿ ಬಾಲ್ ಘಾಟ್ ಎಂಬ ಬಂಗಲೆಯಲ್ಲಿ ಒಂದು ದಿನ ತಂಗಿದ್ದರು. ಅಲ್ಲಿಂದ ದೇವಸ್ಥಾನ, ದರ್ಗಾ ಮಸೀದಿಗಳಿಗೆ ಅವರು ಕಾರಿನಲ್ಲಿ ಹೊರಟಿರುವಾಗ ತೆಗೆದ ಫೋಟೋ ಇದು. (ಇಂದಿನ ವಿಜಯ ಕರ್ನಾಟಕ....) 03.10.2014
Like೦03.102014೩೦೩. ೦. ೪. ೦೨೦೧೪
ಸ್ವಚ್ಛ ಭಾರತ - ಒಂದು ಅನಿಸಿಕೆ 

ಈ ಶುಚಿತ್ವವನ್ನು ಪ್ರತಿಯೊಬ್ಬ ಮನುಷ್ಯನೂ ಸ್ವತಹ ಮಾಡಿಕೊಳ್ಳಬೇಕು.
ನಮ್ಮ ದೇಹ ಮತ್ತು ಮನಸ್ಸನ್ನು ಶುದ್ಧವಾಗಿರಿಸಿಕೊಳ್ಳುವುದರ ಜತೆಗೆ
ನಾವಿರುವ ಪರಿಸರವನ್ನು ಸಹ ಸ್ವಚ್ಚವಾಗಿರಿಸಿಕೊಳ್ಳುವುದೂ ಅತೀ ಅಗತ್ಯ.
ಅದಕ್ಕೇನೇ, ಈ ಸ್ವಚ್ಛ ಭಾರತ ಆಂದೋಲನದ ಶುರು. ಇದು ಬರೆ ಒಂದು ದಿನದ
ಆಂದೋಲನವಾಗದೆ, ಜನ ಜಾಗೃತಿಯಾಗ ಬೇಕು. ಇದ್ದ ಕಸವನ್ನು ತೆಗೆದು ಸ್ವಚ್ಛ ಮಾಡುವುದಷ್ಟೇ ಮುಖ್ಯವಲ್ಲ. ಕಸವನ್ನು ಎಲ್ಲಿ ಹಾಕಬೇಕೋ ಅಲ್ಲೇ ಹಾಕುವ ಪ್ರಜ್ಞೆಯನ್ನು ಜನರಲ್ಲಿ ಹುಟ್ಟಿಸುವುದು ಬಹಳ ಮುಖ್ಯ. ಯಾವುದೇ ಸಿಟಿಯಲ್ಲಿ, ಅಕಸ್ಮಾತ್ ಧಾರಾಕಾರವಾಗಿ ಮಳೆ ಸುರಿದಾಗ, ಚರಂಡಿಯಲ್ಲಿ ಹರಿಯ ಬೇಕಾದ ನೀರು, ರಸ್ತೆಗಳಲ್ಲಿ, ಗಲ್ಲಿಗಳಲ್ಲಿ ಹರಿದು ಮನೆಗಳಿಗೆ ನುಗ್ಗಿ ಅವಾಂತರವಾಗುತ್ತದೆ.
ಜನರು ಇಂತಹ ಸಂಧರ್ಭದಲ್ಲಿ ಬೈಯ್ಯುವುದು. ಸರಕಾರವನ್ನು ಮತ್ತು ಸ್ಥಳೀಯ ಆಡಳಿತವನ್ನು. ಆದರೆ, ಇದಕ್ಕೆ ಜನರೇ ಕಾರಣ. ಎಲ್ಲ ಕಸವನ್ನು ಚರಂಡಿಯಲ್ಲಿ ಹಾಕಿ, ಚರಂಡಿಗಳನ್ನು ಬ್ಲಾಕ್ ಮಾಡಿ ಬಿಟ್ಟಿರುತ್ತಾರೆ. ಇದೊಂದು ಉದಾಹರಣೆ ಅಷ್ಟೇ. ಎಷ್ಟೋ ಮಂದಿ ನೀರು ಹೋಗುವ ದಾರಿಗೆ
ಅಡ್ಡವಾಗಿ ಮನೆ, ಕಾಂಪೌಂಡ್ ಸಹ ಕಟ್ಟಿ ಕೊಳ್ಳುತ್ತಾರೆ.. ನಿಜವಾಗಿ, ಈ ವಿಷಯದಲ್ಲಿ ಜನರಲ್ಲಿ ತಿಳುವಳಿಕೆ ಮೂಡಿಸುವ ಅಭಿಯಾನ ನಡೆಯ ಬೇಕು. ಸ್ಥಳೀಯ ಆಡಳಿತ ತ್ಯಾಜ್ಯ ವಿಲೇವಾರಿ
ಸರಿಯಾಗಿ ನಡೆಯುವಂತೆ ongoing basis ನಲ್ಲಿ ಕ್ರಮ ತೆಗೆದು ಕೊಳ್ಳಬೇಕು.
ಗುರಿ.
ಹರದಾರಿ ಹರದಾರಿ
ಮುಂದೆ ಹೋದರೂ
ಸಿಗಲೊಲ್ಲದು ಸರಿದಾರಿ,
ತಿರುಗಿಸಲು ಜಾಗವಿಲ್ಲ,
ರಿವರ್ಸ್ ಗೇರ್ ಬೀಳ್ತಾ ಇಲ್ಲ.
ಸಾಗಲೇ ಬೇಕು ಮುಂದೆ
ದಾರಿ ಸರಿ ಇರಲಿ ಇಲ್ಲದಿರಲಿ,
ಮುಂದೆಲ್ಲಾದರೂ ಸಿಗಬಹುದು
ಪಾರಾಗಲು ಕವಲು ದಾರಿ.
"ನುಗ್ಗಿ ನಡೆ ನುಗ್ಗಿ ನಡೆ ಮುಂದೆ"
ಕೇಳಲಷ್ಟೆ ಎಷ್ಟು ಚೆಂದ,
ಬೇಕಾದ ಬಲವಿಲ್ಲವಿನ್ನು,
ಹಿಂದೆ ಬಂದ ದಾರಿ ಅಣಕಿಸುತ್ತಿದೆ
ಇನ್ನೆಷ್ಟು ಮುಂದೆ ನೀ ಹೋಗಬೇಕೆಂದು,
ಆದರೂ ಬಿಡಲಾರೆ ಛಲ,
ಕೂಡಿಸುವೆನು ಬಲ
ಸಿಗಲೇ ಬೇಕು ದಾರಿ,
ಮುಟ್ಟಲೇ ಬೇಕು ಗುರಿ
"ನುಗ್ಗಿ ನಡೆ, ನುಗ್ಗಿ ನಡೆ ಮುಂದೆ".
(ನನ್ನದಲ್ಲದ ಒಂದು ಸಾಲು ಬರೆದ ಮಹಾಕವಿಗಳ ಕ್ಷಮೆ ಬೇಡಿ)

02.10.2014

FB Likes and Comments

ಇತ್ತೀಚೆಗೆ ನನ್ನ ಮಿತ್ರರೊಬ್ಬರು, "ಅವರ ಹಿರಿಯ ಮಿತ್ರರೊಬ್ಬರು ಇವರ ಪೋಸ್ಟುಗಳನ್ನು ಓದದೆ ಒಂದರ ಹಿಂದೊಂದು like ಗಳನ್ನು ಒತ್ತಿದ್ದಾರೆ, ಬಹುಶಃ ಅವರಿಗೆ ಅವರ ಪೊಸ್ಟುಗಳಿಗೆ ಇವರ like ಗಳ ಅಪೇಕ್ಷೆ ಇರಬೇಕು, ಅದಕ್ಕೇ ಹೀಗೆ ಮಾಡಿದ್ದಾರೆ" ಎಂದು ಒಂದು status ಹಾಕಿದ್ದರು. ಅದಕ್ಕೆ ನನ್ನ ಪ್ರತಿಕ್ರಿಯೆ ಈ ಕೆಳಗಿನಂತಿದ್ದು, ಅದನ್ನು ನಿಮ್ಮಲ್ಲಿ ಹಂಚಿ ಕೊಳ್ಳುತಿದ್ದೇನೆ.
"ಅವರು ಹಾಗೇನೇ ಮಾಡಿದ್ದಾರೆಂದು ನಿಮಗೇಕೆ ಅನ್ನಿಸಬೇಕು? ಅವರು ಓದಿಯೇ ಮಾಡಿರುವ ಸಾಧ್ಯತೆ ಯಾಕಿಲ್ಲ? ಯಾಕಂದರೆ, News Feed (home) ನಲ್ಲಿ ಎಲ್ಲರ ಪೋಸ್ಟ್ ಗಳನ್ನು ಒಮ್ಮೆಲೇ ನೋಡಲು ಆಗುವುದಿಲ್ಲ. ಅಷ್ಟು ವ್ಯವಧಾನವೂ ಕೆಲವೊಮ್ಮ ಎಲ್ಲರಿಗೂ ಇರುವುದಿಲ್ಲ.ಪೋಸ್ಟುಗಳು ಒಂದರ ಮೇಲೆ ಇನ್ನೊಂದು ಬರುತ್ತಾನೇ ಇರುತ್ತವೆ.
ಅದಕ್ಕೇ, ನಾನೂ ಸಹ ಕೆಲವೊಮ್ಮೆ, ಒಬ್ಬೊಬ್ಬರದೆ timeline open ಮಾಡಿ ಅವರ ಪೊಸ್ಟುಗಳನ್ನು ನೋಡಿ, ಇಷ್ಟ ಆದರೆ like ಒತ್ತುತ್ತೇನೆ, ಅಥವಾ ನನಗನಿಸಿದ ಕಾಮೆಂಟ್ ಮಾಡುತ್ತೇನೆ. ಅಂಥ ಸಂದರ್ಭದಲ್ಲಿ likes ಒಂದರ ಹಿಂದೆ ಒಂದು ಬರ ಬಹುದು. ಅಂದ ಮಾತ್ರಕ್ಕೆ ಅವರು ಪೋಸ್ಟುಗಳನ್ನು
ಓದದೆ ನಿಮ್ಮ ಲೈಕುಗಳ ಅಪೇಕ್ಷೆಯಿಂದ like ಗಳನ್ನು ಮಾಡಿದ್ದಾರೆ ಎಂದು ಕೊಳ್ಳುವುದು ಸರಿಯಲ್ಲ.
ಇಷ್ಟಕ್ಕೂ likes ನಿಂದ ಸಿಗುವುದಾದರೂ ಏನು? ಆದ್ದರಿಂದ ಇಂಥದ್ದಕ್ಕೆಲ್ಲ ತಲೆ ಕೆಡಿಸಿಕೊಳ್ಳಬೇಡಿ. ನೀವು ನಿಮ್ಮ ಪೋಸ್ಟ್ like ಮಾಡಿದವರ ಪೊಸ್ಟಗಳನ್ನು like ಮಾಡಲೇ ಬೇಕೆಂದಿಲ್ಲ. ನಿಮಗೆ ಅನಿಸಿದರಷ್ಟೇ ಮಾಡಬೇಕು, ಯಾರದ್ದೂ ಮುಲಾಜಿಗಲ್ಲ.
ಮತ್ತೊಂದು ವಿಷಯ. ನನಗೆ ಅನ್ನಿಸುತ್ತೆ, fb ಭಾಷೆಯಲ್ಲಿ like ಅಂದರೆ "ನೋಡಿದ್ದೇನೆ" ಅಂತ ಅಷ್ಟೆ, like ನ ಶಬ್ದಾರ್ಥವಾದ "ಮೆಚ್ಚಿದ್ದೇನೆ" ಅಲ್ಲ.  . ಒಬ್ಬ "ನನಗೆ ಇವತ್ತು ಬಹಳ ತಲೆ ನೋವು, ಏನಾದರೂ fast remedy suggest ಮಾಡಿ" ಎಂದು ಪೋಸ್ಟ್ ಹಾಕಿದ್ದ. ಅದಕ್ಕೆ ಅವನ ಸ್ನೇಹಿತರದ್ದು 10 ಕಾಮೆಂಟ್ಸ್ ಇದ್ದರೆ, ಬರೇ like ಗಳು 20 ರ ಮೇಲೆ ಇದ್ದವು  .ಹೇಗಿದೆ?"

02.10.2014
LikeLike ·  · 

FB friends - a Suggestion.

ಸ್ನೇಹಿತರೊಬ್ಬರು ಹೀಗೆ ಒಂದು status ಹಾಕಿದ್ದರು. - "Fb ನಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಅಂತ ಇರುವವರನ್ನು unfriend ಮಾಡುವುದೇ ಒಳ್ಳೆಯದು. ಬದುಕಿದ್ದು ಸತ್ತ ಜೀವಂತ ಶವದಂತೆ ಕೆಲವರು"
ಇದರಿಂದ ಮನಸ್ಸಿಗೆ ಬೇಸರವಾಗಿ ಕೆಳಗೆ ಕಾಣಿಸಿದಂತೆ ಕಾಮೆಂಟ್ ಹಾಕಿದ್ದೆ. ಅದನ್ನು ಎಲ್ಲರೊಡನೆ ಹಂಚಿ ಕೊಳ್ಳುವ ಅನಿಸಿತು. ಅದಕ್ಕೆ ಸ್ಟೇಟಸ್ ರೂಪದಲ್ಲಿ ಹಾಕಿದ್ದೇನೆ. ಈ ಕಾಮೆಂಟ್ ನಲ್ಲಿ ಒಂದು ವಿಷಯ ಬಿಟ್ಟು ಹೋಗಿತ್ತು. ಅದೇನಂದರೆ, "fb ಸ್ನೇಹ ವಲ್ಲದೆ, ಬೇರೆ ವೈಯುಕ್ತಿಕ ಪರಿಚಯ ಅಥವಾ ಸಂಬಂಧ ಇಲ್ಲದಿದ್ದರೆ, ನಮ್ಮ fb ಸ್ನೇಹಿತರಲ್ಲಿ ಯಾರಾದರೂ ನಿಜವಾಗಿ ಸತ್ತು ಹೋದರೆ, ಉಳಿದ ಸ್ನೇಹಿತರಿಗೆ ಗೊತ್ತಾಗುವ ಸಾಧ್ಯತೆಯೂ ಇಲ್ಲ, ಅಲ್ಲವೇ"
"ನಿಮಗೆ ಬೇಡದವರನ್ನು ಸುಮ್ಮನೆ ತೆಗೆದು ಹಾಕಿ. ಎಲ್ಲರೂ fb ನಲ್ಲಿ ನಿಮ್ಮ ಹಾಗೆ active ಇರಬೇಕೆಂದೇನೂ ನಿಯಮವಿಲ್ಲವಲ್ಲ. ಆದರೆ ನೀವು ಬಳಸಿದ ಭಾಷ ಸರಿಯಲ್ಲ. "ಬದುಕಿದ್ದು ಸತ್ತ ಜೀವಂತ ಶವದಂತೆ ಕೆಲವರು" ...ಇಂತಹ ಮಾತುಗಳು ನಮ್ಮದೇ ವ್ಯಕ್ತಿತ್ವದಲ್ಲಿಯೇ ಇರುವ ಸಣ್ಣತನವನ್ನು ತೋರಿಸುತ್ತದೆ. ಹೀಗೆ ಮಾಡಿದರೆ ಸಕಲ ತೀರ್ಥಯಾತ್ರೆಗಳ ಪುಣ್ಯ ಒಂದೇ ಮಾತಿಗೆ ಹೊಳಯಲ್ಲಿ ತೊಳದು ಹೊದಂತಾಗುತ್ತದೆ. ಇಒ ವಿಷಯದಲ್ಲಿ ನನ್ನದು ಇನ್ನೂ ಒಂದು ಸಲಹೆ. ಎಲ್ಲ friend request ಗಳನ್ನು accept ಮಾಡಬೇಡಿ. ಅವರ profile/timeline study ಮಾಡಿ. Inactive ಆಗಿರುವವರು, ಅಥವಾ ಬರೇ cover photo/profile photo ಅಷ್ಟೇ change ಮಾಡ್ತಾ ಇರೋರನ್ನು friend ಮಾಡಿಕೊಳ್ಲಲೇ ಬೇಡಿ. ಇನ್ನು, ಆಗಾಗ time ಸಿಕ್ಕಾಗ, ನಿಮಗೆ ಈಗಿರುವ ಸ್ನೇಹಿತರ timeline review ಮಾಡಿ, ಮೇಲೆ ಹೇಳಿದ ರೀತಿಯಲ್ಲಿರುವವರನ್ನು ತೆಗೆದು ಹಾಕಿ. ಅದು ಬಿಟ್ಟು, ಇಂಥ unparliamentary ಶಬ್ದಗಳನ್ನು ಉಪಯೋಗಿಸಿ ಸ್ಟೇಟಸ್ ಹಾಕಿ, ನಿಮ್ಮನ್ನು ಸಜ್ಜನರು ಎಂದುಕೊಂಡಿರುವವರ ಮನ ಬದಲಾಗುವಂತೆ ಮಾಡಬೇಡಿ. ನನ್ನ ಈ ನೇರನುಡಿಯಿಂದ ಬೇಸರವಾಗಿದ್ದರೆ ಕ್ಷಮಿಸಿ, ಬೇಕಾದರೆ unfriend ಸಹ ಮಾಡಿ....."
Mother and Child


In all species, right from elephant to human,cuddling and fondling each other by mother and child are the real feel of love & affection.

Wednesday 1 October 2014

ಮದುವೆಯ ವಾರ್ಷಿಕೋತ್ಸವವೋ, ಅಥವಾ ಜಗಳದ ವರ್ಷಾಚರಣೆಯೋ......... 


ನಮ್ಮ ಪಕ್ಕದ ಮನೆಯಲ್ಲಿ ಒಬ್ಬರು ವೃದ್ಧ ದಂಪತಿಗಳಿದ್ದಾರೆ. ಗಂಡನಿಗೆ 70 ವರ್ಷ, ಹೆಂಡತಿಗೆ 65 ವರ್ಷವಿರಬಹುದು. ಅವರ ಗಂಡು ಮಕ್ಲಳಿಬ್ಬರು ಬೇರಾವುದೋ ಊರಿನಲ್ಲಿ ಕೆಲಸದಲ್ಲಿದ್ದರು.
ಮತ್ತೊಬ್ಬಳು ಮಗಳನ್ನು ಮದುವೆ ಮಾಡಿ ಕೊಟ್ಟಿದ್ದರು. ತಾವು ಮಾತ್ರ ಯಾವಾಗ ನೋಡಿದರೂ ಏರಿದ ದನಿಗಳಲ್ಲಿ ಜಗಳ ಆಡುತ್ತಲೇ ಇರುತ್ತಿದ್ದರು.
ಒಂದು ದಿನ ನಮ್ಮನ್ನು ಮಧ್ಯಾಹ್ನ ಊಟಕ್ಕೆ ಕರೆದರು. ಯಾಕೆಂದದ್ದಕ್ಕೆ, ಇವತ್ತು ನಮ್ಮ marriage anniversary ಅದಕ್ಕೇ ಬನ್ನಿ ಅಂದರು. ಅವರ ಜಗಳ ಕೇಳಿ ಕೇಳಿ ಬೇಸತ್ತಿದ್ದ ನಾವು, ಹೋಗುವುದೋ ಬೇಡವೋ ಎಂದು ಯೋಚಿಸಿ ಯೋಚಿಸಿ, ಕೊನೆಗೆ, ನೆರೆಹೊರೆಯಲ್ಲ ಅಂದು ಕೊಂಡು ಹೋದೆವು.
ನಾವು ಹೋದಾಗ ಸಹ ಯಾವುದಕ್ಕೋ ಜೋರಾಗಿ ಜಗಳ ನಡೆಯುತಿತ್ತು. ನಾವು ಹೋದ ಕೂಡಲೆ ಸ್ವಲ್ಪ ಶಾಂತವಾಯಿತು. ಅವರ ಮದುವೆಯ 40ನೇ ವಾರ್ಷಿಕೋತ್ಸವಕ್ಕೆ Best wishes ಹೇಳಿದೆವು. ಅಂತೂ ಇಂತೂ ಊಟನೂ ಮುಗಿಯಿತು.
ಆಗ ನಾನು ಆ ಅಜ್ಜನನ್ನು ಕೇಳಿದೆ, "ಅಲ್ಲಾ, ಮದುವೆಯಾಗಿ 40 ವರ್ಷ ಆಯಿತು ಅಂತೀರಾ, ಇನ್ನೂ ಯಾಕೆ ಹೀಗೆ ಜಗಳ ಆಡ್ತೀರಾ? ರಾಮ ಕೃಷ್ಣ ಅಂದುಕೊಂಡು ಹಾಯಾಗಿರ ಬಾರದೇ?"
ಆಗ ಅವರು ಜೋರಾಗಿ ನಕ್ಕು, "ರಾಯರೇ, ಇವತ್ತು ಬರೇ ನಮ್ಮ ಮದುವೆಯ 40 ನೇ ವಾರ್ಷಿಕೋತ್ಸವ ಅಲ್ಲ, ನಮ್ಮ ಜಗಳದ್ದೂ ಕೂಡ 40ನೇ ವಾರ್ಷಿಕೋತ್ಸವ' ಎಂದರು. ಕುತೂಹಲದಿಂದ "ಅದು ಹೇಗ, ರಾಯರೇ?" ಎಂದೆ.
"ನೋಡಿ, ನಮ್ಮ ಮದುವೆ ಆದದ್ದು ನಮ್ಮೂರಿಗೆ 25 kms ದೂರದ ಒಂದು ದೇವಸ್ಥಾನದಲ್ಲಿ. ಗೋಧೂಳಿ ಲಗ್ನ. ಊಟವೆಲ್ಲ ಮುಗಿಯುವಾಗ ರಾತ್ರಿ 9.30 ಗಂಟೆಯಾಯಿತು. ಮದುಮಗಳನ್ನು ಕೈ ಎತ್ತಿ ಕೊಡುವ ಶಾಸ್ತ್ರವೂ ಮುಗಿದು, ಎಲ್ಲರೂ ನಮ್ಮ ಮನೆ ಮುಟ್ಟುವಾಗ ರಾತ್ರಿ 10.30 ಗಂಟೆ. ಬಂದು ನೋಡಿದರೆ, ಮದುಮಗಳ ಬಟ್ಟೆಬರೆ ಇತ್ಯಾದಿಗಳಿದ್ದ ಪೆಟ್ಟಿಗೆ ಇಲ್ಲ. !!!!
ಈಕೆ ಕೂಡಲೇ ಹಿಂದೆ ಮುಂದೆ ನೋಡದೆ ಜಗಳವೇ ಶುರು ಮಾಡಿದಳು. "ಈಗಲೇ ನನ್ನ ಬಗ್ಗೆ ಇಷ್ಟು ನಿಷ್ಕಾಳಜಿ ಮಾಡುವ ನೀವು ಮತ್ತು ನಿಮ್ಮ ಮನೆಯವರು, ಮುಂದೆ ನನ್ನನ್ನು ಏನು ಮಾಡೀರೀ, ಹಾಗೆ ಹೀಗೆ ....." ಅಂತ.
ನಾವು ಈಗಲೇ ಹೋಗಿ ಪೆಟ್ಟಿಗೆ ತರುತ್ತೇವೆಂದು ಹೊರಟರೂ ಈಕೆ ಎಲ್ಲರ ಮೇಲೆ ಒದರಾಡುವುದನ್ನು ನಿಲ್ಲಿಸಲಿಲ್ಲ. ಆ ರಾತ್ರಿಗೆ ಒಂದು taxi ಮಾಡಿಕೊಂಡು ಹೋಗಿ ಅರ್ಚಕರು ಎತ್ತಿಟ್ಟಿದ್ದ ಪೆಟ್ಟಿಗೆ ತಂದದ್ದಾಯಿತು. ಈಕೆ ಈ ತರ ಜಗಳಗಂಟಿ ಎಂದು ಆವತ್ತೇ ಗೊತ್ತಾಗಿ ಹೋಯಿತು. ಆದರೇನು ಮಾಡುವುದು, ಮದುವೆ ಆಗಿ ಹೋಗಿತ್ತು... !! ಅಂದು ಶರುವಾದ ಜಗಳ ಇನ್ನೂ ನಡೆದೇ ಇದೆ. ಅದು ಹೇಗೋ ಈ ಜಗಳದಲ್ಲೇ ಮೂರು ಮಕ್ಕಳೂ ಆದವು...." ಎಂದು ಮುಸಿ ಮುಸಿ ನಕ್ಕರು.
ಅಷ್ಟೊತ್ತಿಗೆ, ಅದುವರೆಗೆ ಅಡುಗೆ ಮನೆಯಲ್ಲಿ ಏನೋ ಮಾಡುತ್ತಿದ್ದ ಅಜ್ಜಿ ಸೊಂಟಕ್ಕೆ ಸೆರಗು ಸಿಕ್ಕಸಿಕೊಂಡು ಬಂದೇ ಬಿಟ್ಟರು. "ಏನು, ಹಳೇ ಪುರಾಣ ಎಲ್ಲ ಹೇಳಿ, ಬಂದವರ ಎದುರಿಗೆ ನನ್ನನ್ನು ಜಗಳಗಂಟಿ ಎಂದು ಮರ್ಯಾದೆ ಕಳೀತೀರಾ, ಏನನ್ನ ಬೇಕು ನಿಮ್ಮ ಮುಖಕ್ಕೆ?" ಎಂದು ಏರಿದ ದನಿಯಲ್ಲಿ ಜಗಳ ಶುರು ಮಾಡಿಯೇ ಬಿಟ್ಟರು. "ನೀನು ಜಗಳಗಂಟಿ ಅಲ್ಲವೇನು ಮತ್ತೆ? ಇದ್ದುದನ್ನು ಇದ್ದ ಹಾಗೆ ಹೇಳಿದರೆ, ಏನು ಭಾಳಾ ಹಾರಾಡ್ತೀ" ಎಂದು ಮುದುಕ ಶುರು ಮಾಡಿದರು.
ನಾವು ದಂಗಾಗಿ, "ರಾಯರೇ, ನಾವಿನ್ನು ಬರುತ್ತೇವೆ, ಇನ್ನೊಮ್ಮೆ ನಿಮಗೆ ಮದುವೆಯ ದಿನದ ಶುಭಾಶಯಗಳು," ಎಂದು, ಮನಸ್ಸಿನಲ್ಲಿ "ಜಗಳದ ದಿನದ್ದೂ ಶುಭಾಶಯಗಳು(?)" ಎಂದುಕೊಂಡು ಎದ್ದು ಬಂದು ಬಿಟ್ಟೆವು.
***************

30.09.2014