Thursday 8 January 2015

ಬದುಕು.
ತನಗಾರೂ ಇಲ್ಲ,
ಎಲ್ಲಾ ಹೋಯಿತು, ಸೋತು ಬಿಟ್ಟೆ,
ನಂಬಿದವರೆಲ್ಲಾ ಕೈ ಕೊಟ್ಟರು,
ಬಾಬಾ ಹೇಳಿದ್ದೂ ನಡೆಯಲಿಲ್ಲ,
ಪೂಜಾರಯ್ಯನ ಉಪದೇಶ ಫಲಿಸಲಿಲ್ಲ,
ಇನ್ನೇಕೆ ಬದುಕಲಿ, ಯಾಕಾಗಿ ಇರಲಿ,
ಇನ್ನುಳಿದುದೊಂದೇ ದಾರಿ, ಅದೇ ಕೊನೆಯ ದಾರಿ,
ಎಲ್ಲಾ ಮೋಕ್ಷ, ಕಡೆಗೆ ನಿರ್ವಾಣ ,
ನಡೆದೇ ಬಿಟ್ಟ ಗಂಗಮ್ಮನೆಡೆಗೆ ಮುಖಮಾಡಿ....
ದಾರಿಯಲ್ಲೊಂದು ಬೋಳು ಮರ,
ಆ ಮರದ ಕೆಳಗೊಬ್ಬ ತೊಂಭತ್ತು ವರ್ಷದ ಮುದುಕ,
ಕೂತಿದ್ದ ಬೀಡಿ ಸೇದಿಕೊಂಡು, ಕೆಮ್ಮಿಕೊಂಡು,
ಅಡ್ಡ ಹಾಕಿದ ಇವನನ್ನು, "ಯಪ್ಪಾ, ಒಂದು ರುಪಾಯಿ ಕೊಡು,
ಇನ್ನೆರಡು ಬೀಡಿ ಸೇದ್ತೀನಿ......."
ಇವನಂದ, "ಏ ಅಜ್ಜಾ, ಸಾಯಾಕ್ ಬಿದ್ದಿ, ಇನ್ಯಾಕ್ ಬೀಡಿ,
ನಾನೂ ಹೊಂಟೀನಿ, ಬಾ, ಇಬ್ಬರೂ ಹೊಳ್ಯಾಗ್ ಬಿದ್ದು ಸಾಯೋಣು"
ಬೆಚ್ಚಿ ಬಿದ್ದ ಮುದುಕ. "ನನ್ನ ತಲೆ ನೆಟ್ಟಗೈತಲೇ, ನಾ ಯಾಕ್ ಸಾಯಲಿ,
ನೀ ಒಂದು ರುಪಾಯಿ ಕೊಡ್ತಿಯಾದರೆ ಕೊಡು....ಇನ್ನೆರಡು ಬೀಡಿ ಎಳೆದು
ಮನೀಗ್ ಹೊಕ್ಕೀನಿ, ನನ್ ಮುದ್ಕಿ ಕಾಯಾಕ್ ಕುಂತಾಳೆ...ಆಕೆ ಜತೆ
ಇನ್ ಹತ್ತು ವರ್ಷರೀ ಬದಕಬೇಕ್ ನಂಗೆ" ... ಅಂದ ತೊಂಭತ್ತು ವರ್ಷದ ಮುದುಕ.... !!!!
ಜ್ಙಾನೋದಯವಾಯಿತಿವನಿಗೆ..."ತೊಂಭತ್ತು ವರ್ಷದ ಮುದುಕ, ಇನ್ನು
ಹತ್ತು ವರ್ಷ ಬದುಕ ಬೇಕಂತೆ, ಇವ್ನ ಮುದ್ಕಿ ಜತೆ......."
ಇವನಿಗೂ ನೆನಪಾಯಿತು, ಮನೆಯಲ್ಲಿ ಹೆಂಡತಿ ಕಾಯುತಿದ್ದಾಳೆ ಎಂದು,..
ಸಾವನ್ನೂ ಮರೆತ, ನದಿಯನ್ನೂ ಮರೆತ,
ತಲೆ ಕೊಡವಿಕೊಂದು ತಿರುಗಿ ಓಡಿದ ಮನೆಯ ಕಡೆ ಹಿಂದೆ ನೋಡದೆ..... !!!!
08.01.2015

No comments:

Post a Comment